Sunday, January 11, 2026

ಜುಬೀನ್ ಗರ್ಗ್ ಸಾವಿನ ಕೇಸ್‌ಗೆ ಹೊಸ ತಿರುವು: ಕೋರ್ಟ್‌ಗೆ ಬೃಹತ್ ಆರೋಪಪಟ್ಟಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿವಂಗತ ಜನಪ್ರಿಯ ಗಾಯಕ ಜುಬೀನ್ ಗರ್ಗ್ ಅವರ ನಿಗೂಢ ಸಾವಿನ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಗುರುವಾರ ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಒಂದು ಬೃಹತ್ ಮತ್ತು ವಿವರವಾದ ಆರೋಪಪಟ್ಟಿಯನ್ನು ಸಲ್ಲಿಸಿದೆ. ತನಿಖೆಯ ಮಹತ್ವ ಮತ್ತು ವ್ಯಾಪ್ತಿಯನ್ನು ಸಾರಿರುವ ಈ ದಾಖಲೆಯು 3,500 ಪುಟಗಳಿಗೂ ಹೆಚ್ಚು ಇದ್ದು, ಇದನ್ನು ನ್ಯಾಯಾಲಯಕ್ಕೆ ತರಲು ನಾಲ್ಕು ದೊಡ್ಡ ಟ್ರಂಕ್‌ಗಳನ್ನು ಬಳಸಲಾಯಿತು.

ವಿಶೇಷ ಡಿಜಿಪಿ ಎಂಪಿ ಗುಪ್ತಾ ನೇತೃತ್ವದ ಈ SIT ತಂಡವು 300 ಕ್ಕೂ ಹೆಚ್ಚು ಸಾಕ್ಷಿಗಳನ್ನು ಪ್ರಶ್ನಿಸಿದೆ ಮತ್ತು ತನಿಖೆಯ ಭಾಗವಾಗಿ ಈವರೆಗೆ ಉತ್ಸವದ ಮುಖ್ಯ ಸಂಘಟಕ ಶ್ಯಾಮಕಾನು ಮಹಾಂತ ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಿದೆ. ಒಂಬತ್ತು ಸದಸ್ಯರನ್ನು ಒಳಗೊಂಡ ತನಿಖಾ ತಂಡವು ಆರು ವಾಹನಗಳ ಬೆಂಗಾವಲು ಪಡೆಯಲ್ಲಿ ಆರೋಪಪಟ್ಟಿ ಮತ್ತು ಸಂಬಂಧಿತ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಮಂಡಿಸಲು ಆಗಮಿಸಿತು.

ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ 4ನೇ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಿದ್ದಾಗ ಜುಬೀನ್ ಗರ್ಗ್ ಸಮುದ್ರದಲ್ಲಿ ಈಜುತ್ತಿದ್ದಾಗ ಮೃತಪಟ್ಟಿದ್ದರು. ಈ ಸಾವಿನ ಸುತ್ತ ಅನುಮಾನಗಳು ಮನೆಮಾಡಿದ್ದರಿಂದ, ಅಸ್ಸಾಂ ಸರ್ಕಾರವು ತನಿಖೆಗಾಗಿ ಎಸ್‌ಐಟಿಯನ್ನು ರಚಿಸಿತ್ತು.

ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಘಟನೆಯು ‘ಕೊಲೆ’ ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ರಾಜಕೀಯ ಮಹತ್ವ ನೀಡಿದ್ದರು.

ಜುಬೀನ್ ಗರ್ಗ್ ಸಾವಿನ ಕುರಿತು ಸ್ವತಃ ತನಿಖೆ ನಡೆಸುತ್ತಿರುವ ಸಿಂಗಾಪುರದ ಅಧಿಕಾರಿಗಳು ತಮ್ಮ ಆರಂಭಿಕ ತನಿಖೆಯಲ್ಲಿ ಯಾವುದೇ ಅಕ್ರಮದ ಸುಳಿವು ದೊರೆತಿಲ್ಲ ಎಂದು ಹೇಳಿದ್ದರೂ, ಸಿಂಗಾಪುರ ಪೊಲೀಸ್ ಪಡೆ ತಮ್ಮ ತನಿಖೆ ಇನ್ನೂ ಮೂರು ತಿಂಗಳವರೆಗೆ ಮುಂದುವರಿಯಬಹುದು ಎಂದು ತಿಳಿಸಿದೆ.

ಈ ನಡುವೆ, ಅಸ್ಸಾಂನ ಕಾಟನ್ ವಿಶ್ವವಿದ್ಯಾಲಯವು ಐಕಾನ್ ಗಾಯಕ ಜುಬೀನ್ ಗರ್ಗ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!