ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದು, ರಾಜಕೀಯ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಇದೀಗ ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿ ಬಿಜೆಪಿ ಸಂಸದರೊಬ್ಬರು ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಬಿಜೆಪಿಯ ಕೇಂದ್ರ ಸಚಿವ ಗಿರಿರಾಜ್ ಸಿಂಗ್ , ಮುಸ್ಲಿಮರನ್ನು ನಮಕ್ ಹರಾಮ್ಗಳು ಎಂದು ಕರೆದಿದ್ದಾರೆ.
ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಗಿರಿರಾಜ್ ಸಿಂಗ್, ನಮಕ್ ಹರಾಮ್ಗಳ ಮತ ನಮಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಒಮ್ಮೆ ನಾನು ಮೌಲ್ವಿ ಅವರನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹೊಂದಿದ್ದೀರಾ ಎಂದು ಕೇಳಿದಾಗ ಅವರು ಸಕಾರಾತ್ಮಕವಾಗಿ ಉತ್ತರಿಸಿದರು. ಅಂತಹ ಕಾರ್ಡ್ಗಳನ್ನು ಹಿಂದು- ಮುಸ್ಲಿಂ ಆಧಾರದ ಮೇಲೆ ವಿತರಿಸಲಾಗಿದೆಯೇ ಎಂದು ನಾನು ಕೇಳಿದೆ. ಅದಕ್ಕೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು ಎಂದರು.
ನೀವು ನನಗೆ ಮತ ಹಾಕಿದ್ದೀರಾ ಎಂದು ನಾನು ಕೇಳಿದಾಗ, ಅವರು ಸಕಾರಾತ್ಮಕವಾಗಿ ಉತ್ತರಿಸಿದರು. ಆದರೆ ನಾನು ಅವರನ್ನು ಖುದಾ ಮೇಲೆ ಪ್ರಮಾಣ ಮಾಡುವಂತೆ ಕೇಳಿದಾಗ ಅವರು ಇಲ್ಲ ಎಂದು ಹೇಳಿದರು. ಮುಸ್ಲಿಮರು ಎಲ್ಲ ಕೇಂದ್ರ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಾರೆ. ಆದರೆ ನಮಗೆ ಮತ ಹಾಕಬೇಡಿ..ಅಂತಹ ಜನರನ್ನು ‘ನಮಕ್ ಹರಾಮ್’ ಎಂದು ಕರೆಯಲಾಗುತ್ತದೆ. ನಾನು ಅಂತಹ ನಮಕ್ ಹರಾಮ್ ಮತಗಳನ್ನು ಬಯಸುವುದಿಲ್ಲ ಎಂದು ತಿಳಿಸಿದರು.