ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವನ್ನು ಉಕ್ಕು ಉತ್ಪಾದನೆಯಲ್ಲಿ ಜಾಗತಿಕ ಮುಂಚೂಣಿಗೆ ತರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 2030ರ ವೇಳೆಗೆ ಭಾರತವು ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಘೋಷಿಸಿದರು.
ರೊರ್ಕೆಲಾ ಉಕ್ಕು ಸ್ಥಾವರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಈ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ರೊರ್ಕೆಲಾ ಉಕ್ಕು ಸ್ಥಾವರದ ವಿಸ್ತರಣೆ ಸೇರಿದಂತೆ ಉಕ್ಕು ಕ್ಷೇತ್ರದ ಅಭಿವೃದ್ಧಿಗೆ ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಒಡಿಶಾ ಸರ್ಕಾರದೊಂದಿಗೆ ‘ಫಲಪ್ರದ’ ಮಾತುಕತೆ
ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ಭುವನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿನ ಉಕ್ಕು ಮತ್ತು ಗಣಿಗಾರಿಕೆ ಸಂಬಂಧಿತ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಿದರು. ರೂರ್ಕೆಲಾ ಉಕ್ಕು ಸ್ಥಾವರದ ಕಾರ್ಯಾಚರಣೆ ಮತ್ತು ಅದರ ಯೋಜಿತ ವಿಸ್ತರಣೆಯ ಕುರಿತು ಈ ಸಭೆಯಲ್ಲಿ ಪ್ರಮುಖವಾಗಿ ಪರಿಶೀಲನೆ ನಡೆಸಲಾಯಿತು. ಒಡಿಶಾ ರಾಜ್ಯದವರೇ ಆದ ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಜುಯಲ್ ಓರಾಮ್ ಕೂಡ ಈ ಮಹತ್ವದ ಸಭೆಯಲ್ಲಿ ಹಾಜರಿದ್ದರು.
ಈ ಮಾತುಕತೆಯನ್ನು ‘ಅತ್ಯಂತ ಫಲಪ್ರದ’ ಎಂದು ಬಣ್ಣಿಸಿದ ಸಚಿವ ಕುಮಾರಸ್ವಾಮಿ, ಒಡಿಶಾವನ್ನು ಪ್ರಮುಖ ಉಕ್ಕು ಮತ್ತು ಗಣಿಗಾರಿಕೆ ಕೇಂದ್ರವಾಗಿ ಬಲಪಡಿಸುವುದರ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು ಎಂದು ಮಾಹಿತಿ ನೀಡಿದರು. ರಾಷ್ಟ್ರದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿರುವ ಉಕ್ಕು ಕ್ಷೇತ್ರವನ್ನು ಬಲಪಡಿಸಲು ಪ್ರಮುಖ ಉಕ್ಕು ಉತ್ಪಾದಕ ರಾಜ್ಯಗಳಲ್ಲಿ ಒಂದಾದ ಒಡಿಶಾ ಸರ್ಕಾರವು ಕೇಂದ್ರಕ್ಕೆ ಎಲ್ಲಾ ಸಹಕಾರವನ್ನು ನೀಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಮಾಝಿ ಭರವಸೆ ನೀಡಿದ್ದಾರೆ ಎಂದು ಅವರು ವಿವರಿಸಿದರು.
ಈ ಗುರಿ ಸಾಧನೆಗೆ ಕೇಂದ್ರ ಉಕ್ಕು ಸಚಿವಾಲಯ ಮತ್ತು ಒಡಿಶಾ ಸರ್ಕಾರದ ಹಿರಿಯ ಅಧಿಕಾರಿಗಳು ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದು, ಒಡಿಶಾದಲ್ಲಿ ಉಕ್ಕು ಮತ್ತು ಗಣಿಗಾರಿಕೆ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

