ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಬಜೆಟ್ ವಿರೋಧಿಸಿ ವಿಧಾನಸೌಧದಲ್ಲಿ ಬಿಜೆಪಿ ನಡೆಸಿದ ‘ಚೊಂಬು’ ಪ್ರದರ್ಶನದ ಪ್ರತಿಭಟನೆಯಿಂದ ಜೆಡಿಎಸ್ ಶಾಸಕರು ಅಂತರ ಕಾಯ್ದುಕೊಳ್ಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಬಿಜೆಪಿ ನಾಯಕರು ಜೆಡಿಎಸ್ ಜೊತೆ ಯಾವುದೇ ಪೂರ್ವ ಚರ್ಚೆ ನಡೆಸಿಲ್ಲ ಎನ್ನಲಾಗಿದೆ. “ಬಿಜೆಪಿಯವರು ಎಲ್ಲವನ್ನೂ ತಾವೇ ಪ್ಲಾನ್ ಮಾಡಿ, ಕೊನೆ ಕ್ಷಣದಲ್ಲಿ ಕೇವಲ ನಾಮಕಾವಸ್ಥೆಗೆ ನಮ್ಮನ್ನು ಕರೆಯುತ್ತಾರೆ. ಹೀಗಾಗಿ ನಾವು ಭಾಗವಹಿಸುವುದಿಲ್ಲ” ಎಂದು ಜೆಡಿಎಸ್ ಶಾಸಕರು ತಮ್ಮ ನಾಯಕರಿಗೆ ದೂರು ನೀಡಿದ್ದಾರೆ. ಈ ಸಮನ್ವಯದ ಕೊರತೆಯು ಮೈತ್ರಿ ಧರ್ಮಕ್ಕೆ ಧಕ್ಕೆ ತರುತ್ತಿದೆ ಎಂಬ ಚರ್ಚೆ ಶುರುವಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು, ಬಿಜೆಪಿಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಬಿಜೆಪಿಯವರನ್ನು ಪ್ರೀತಿಸುತ್ತಿದ್ದೇವೆ, ಆದರೆ ಅವರಿಗೆ ನಮ್ಮ ಮೇಲೆ ಪ್ರೀತಿಯಿಲ್ಲದ ‘ಒನ್ ಸೈಡ್ ಲವ್’ ತರಹದ ವರ್ತನೆಯಾಗಿದೆ. ಬಿಜೆಪಿಯ ಕೆಲವು ನಾಯಕರು ನಮಗೆ ಚಿವುಟಿ, ಅವರೇ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಹೊಸ ಬಾಂಬ್ ಸಿಡಿಸಿರುವ ಕಂದಕೂರು, “ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಮುಂದಿನ ಚುನಾವಣೆಯಲ್ಲಿ 140 ರಿಂದ 150 ಸ್ಥಾನಗಳು ಬರುವುದು ನಿಶ್ಚಿತ. ಮೈತ್ರಿ ಇರಲಿ ಬಿಡಲಿ, ನಮ್ಮ ಪಾಲಿಗೆ ಕುಮಾರಸ್ವಾಮಿ ಅವರೇ ಸಿಎಂ ಅಭ್ಯರ್ಥಿ. ಬಿಜೆಪಿಯವರು ತಮ್ಮ ಅಭ್ಯರ್ಥಿ ಯಾರು ಎಂಬುದನ್ನು ಸ್ಪಷ್ಟಪಡಿಸಲಿ” ಎಂದು ಸವಾಲು ಹಾಕಿದ್ದಾರೆ.



