ನಂಬಿಕೆ ಇರಲಿ, ಆದರೆ ಅದು ಅಹಂಕಾರವಾಗದಿರಲಿ. ಜೀವನದಲ್ಲಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದೆಂದರೆ ಅದು ‘ಅತಿಯಾದ ಆತ್ಮವಿಶ್ವಾಸ’. “ನನಗೆ ಎಲ್ಲವೂ ಗೊತ್ತು”, “ನಾನು ತಪ್ಪು ಮಾಡಲೇ ಸಾಧ್ಯವಿಲ್ಲ” ಎಂಬ ಭಾವನೆ ಮನುಷ್ಯನನ್ನು ಪ್ರಪಾತಕ್ಕೆ ತಳ್ಳುತ್ತದೆ.
ಅತಿಯಾದ ಆತ್ಮವಿಶ್ವಾಸವಿದ್ದಾಗ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ನಮ್ಮ ಕಣ್ಣಿಗೆ ಬೀಳುವುದಿಲ್ಲ. ಇದು ಮುಂದೊಂದು ದಿನ ದೊಡ್ಡ ಅವಾಂತರಕ್ಕೆ ಕಾರಣವಾಗಬಹುದು.
“ನನಗೆಲ್ಲಾ ತಿಳಿದಿದೆ” ಅಂದುಕೊಂಡ ಕ್ಷಣವೇ ಹೊಸ ವಿಷಯಗಳನ್ನು ಕಲಿಯುವ ಹಸಿವು ಸತ್ತುಹೋಗುತ್ತದೆ. ಜ್ಞಾನದ ಹರಿವು ಅಲ್ಲಿಗೆ ನಿಂತುಬಿಡುತ್ತದೆ.
ಅತಿಯಾದ ಕಾನ್ಫಿಡೆನ್ಸ್ನಿಂದಾಗಿ ಮುಂದೆ ಬರಬಹುದಾದ ಸವಾಲುಗಳನ್ನು ಅಥವಾ ಅಪಾಯಗಳನ್ನು ಅಂದಾಜಿಸುವಲ್ಲಿ ನಾವು ವಿಫಲರಾಗುತ್ತೇವೆ.
ಬೇರೆಯವರು ನೀಡುವ ಉತ್ತಮ ಸಲಹೆಗಳು ನಮಗೆ ಕೇವಲ ಟೀಕೆಗಳಂತೆ ಕಾಣುತ್ತವೆ. ಇದರಿಂದ ಒಳ್ಳೆಯ ಮಾರ್ಗದರ್ಶನವನ್ನು ನಾವು ಕಳೆದುಕೊಳ್ಳುತ್ತೇವೆ.
ಇದು ಕೇವಲ ಕೆಲಸದಲ್ಲಿ ಮಾತ್ರವಲ್ಲ, ವೈಯಕ್ತಿಕ ಜೀವನದಲ್ಲೂ “ನಾನೇ ಸರಿ” ಎಂಬ ಧೋರಣೆ ತರುತ್ತದೆ. ಇದು ಪ್ರೀತಿಪಾತ್ರರ ನಡುವೆ ಅಂತರವನ್ನು ಸೃಷ್ಟಿಸುತ್ತದೆ.
ಆತ್ಮವಿಶ್ವಾಸ ಎಂಬುದು ಉಪ್ಪಿನಂತೆ.. ಅಡುಗೆಗೆ ರುಚಿ ಕೊಡಲು ಬೇಕೇ ಬೇಕು, ಆದರೆ ಅತಿಯಾದರೆ ಇಡೀ ಅಡುಗೆಯೇ ಹಾಳಾಗುತ್ತದೆ.



