January16, 2026
Friday, January 16, 2026
spot_img

ಅಂದು ಆಕ್ಸಿಜನ್‌ ಲೆವೆಲ್‌ ಶೇ 50ಕ್ಕೆ ಇಳಿದಿತ್ತು: ಶ್ರೇಯಸ್‌ ಅಯ್ಯರ್‌ ಅರೋಗ್ಯ ಈಗ ಹೇಗಿದೆ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಸಿಡ್ನಿಯ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ವೈದ್ಯರು ಆರಂಭದಲ್ಲಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದರು.

ಬಿಸಿಸಿಐ ಮೂಲಗಳ ಪ್ರಕಾರ, ಗಾಯದ ನಂತರ ಅಯ್ಯರ್ ಅವರ ಆಮ್ಲಜನಕದ ಮಟ್ಟ 50%ಕ್ಕೆ ಇಳಿದಿತ್ತು. ಕನಿಷ್ಠ ಹತ್ತು ನಿಮಿಷಗಳ ಕಾಲ ನಿಲ್ಲಲು ಸಾಧ್ಯವಾಗಲಿಲ್ಲ. ಅವರು ಸಂಪೂರ್ಣವಾಗಿ ಬ್ಲ್ಯಾಕ್‌ಔಟ್‌ಗೆ ಒಳಗಾಗಿದ್ದರು ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಈ ಸ್ಥಿತಿಯಿಂದ ಸಾಮಾನ್ಯ ಸ್ಥಿತಿಗೆ ಬರಲು ಕೆಲವು ಗಂಟೆಗಳು ಬೇಕಾಯಿತು.

ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡರು. ಹರ್ಷಿತ್ ರಾಣಾ ಎಸೆದ ಓವರ್‌ನಲ್ಲಿ ಅಲೆಕ್ಸ್ ಕ್ಯಾರಿ ಬ್ಯಾಟ್‌ನ ಎಡ್ಜ್‌ಗೆ ತಗುಲಿ ಚೆಂಡು ಗಾಳಿಯಲ್ಲಿ ಹಾರಿತು. ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಯ್ಯರ್, ಅದ್ಭುತವಾಗಿ ಡೈವ್ ಮಾಡಿ ಕ್ಯಾಚ್ ಹಿಡಿದರು. ಆದರೆ ಅದೇ ಸಮಯದಲ್ಲಿ ಅವರು ನೆಲಕ್ಕೆ ಬಲವಾಗಿ ಬಿದ್ದಿದ್ದರಿಂದ ಗಾಯಗೊಂಡರು. ನೋವಿನಿಂದಾಗಿ ಮೈದಾನದಿಂದ ಹೊರನಡೆದರು.

ಮರುದಿನ ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಆಂತರಿಕ ರಕ್ತಸ್ರಾವ ಇರುವುದು ಪತ್ತೆಯಾಯಿತು. ತಕ್ಷಣವೇ ವೈದ್ಯರು ಅವರನ್ನು ಐಸಿಯುಗೆ ದಾಖಲಿಸಿದರು. ಚಿಕಿತ್ಸೆಯ ನಂತರ ಕೆಲವು ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಯಿತಾದರೂ, ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕು ಎಂದು ತಿಳಿಸಿದ್ದಾರೆ.

ನವೆಂಬರ್ 30 ರಿಂದ ಆರಂಭವಾಗಲಿರುವ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಭಾಗವಹಿಸುವುದು ಕಷ್ಟ ಎಂಬುದು ಸ್ಪಷ್ಟವಾಗಿದೆ. ಅವರು ಪ್ರಸ್ತುತ ಫಿಟ್‌ನೆಸ್ ಚೇತರಿಕೆಯಲ್ಲಿದ್ದರೂ, ಸಂಪೂರ್ಣ ಫಿಟ್ ಆಗಲು ಇನ್ನೂ ಒಂದು ತಿಂಗಳು ಬೇಕಾಗಬಹುದು ಎಂದು ವೈದ್ಯರು ಸೂಚಿಸಿದ್ದಾರೆ.

ಬಿಸಿಸಿಐ ಅಧಿಕಾರಿಗಳ ಪ್ರಕಾರ, “ಶ್ರೇಯಸ್ ಅವರ ಗಾಯ ಗಂಭೀರವಾಗಿದೆ. ನಾವು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದೇವೆ. ಅವರನ್ನು ಬೇಗನೆ ಮೈದಾನಕ್ಕೆ ಕರೆತರಲು ನಾವು ಆತುರಪಡುವುದಿಲ್ಲ” ಎಂದು ತಿಳಿಸಿದ್ದಾರೆ.

Must Read

error: Content is protected !!