ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದು ಭಾರತದ ವಿದೇಶಾಂಗ ನೀತಿಗೆ ಸಂಕಷ್ಟ ತಂದೊಡ್ಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಇದು ಭಾರತದ ಪಾಲಿಗೆ ರಾಜತಾಂತ್ರಿಕ ಸೋಲು ಎಂದು ಅವರು ಬಣ್ಣಿಸಿದ್ದಾರೆ.
ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “2008ರ ಮುಂಬೈ ಭೀಕರ ದಾಳಿಯ ಬಳಿಕ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರವು ಪಾಕಿಸ್ತಾನದ ಮುಖವಾಡವನ್ನು ಜಗತ್ತಿನೆದುರು ಕಳಚಿತ್ತು. ಆ ಮೂಲಕ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾರೂ ಹತ್ತಿರ ಸೇರಿಸದಂತೆ ಒಂಟಿಯಾಗಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ” ಎಂದರು.
ಮೋದಿ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನವನ್ನು ಜಾಗತಿಕವಾಗಿ ಮೂಲೆಗುಂಪು ಮಾಡುವ ಪ್ರಯತ್ನಗಳು ವಿಫಲವಾಗಿವೆ. ಈಗ ಅದೇ ಪಾಕಿಸ್ತಾನ ಪಶ್ಚಿಮ ಏಷ್ಯಾದ ಅಮೆರಿಕ ಮತ್ತು ಇರಾನ್ನಂತಹ ಪ್ರಬಲ ದೇಶಗಳ ನಡುವೆ ಸಂಧಾನಕಾರನಾಗಿ ಗುರುತಿಸಿಕೊಳ್ಳುತ್ತಿರುವುದು ಭಾರತಕ್ಕೆ ಹಿನ್ನಡೆಯೇ ಸರಿ ಎಂದು ರಮೇಶ್ ಟೀಕಿಸಿದ್ದಾರೆ.



