ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯ ಸಂಘರ್ಷಕ್ಕೆ ವಿರಾಮ ಘೋಷಣೆಯಾಗಿದ್ದು, ಈ ಬೆನ್ನಲ್ಲೇ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಅಮೆರಿಕ -ಇರಾನ್ ನಡುವೆ ಶಾಂತಿ ಮಾತುಕತೆ ನಡೆಯುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಭಾರತದ ಜವಾಬ್ದಾರಿಯುತ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಮೆರಿಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಗೆ ಕಳಿಸಿದ್ದ ಕರಡು ಪ್ರತಿಯನ್ನು ಉಲ್ಲೇಖಿಸಿ ತರೂರ್, ಪಾಕಿಸ್ತಾನ ಹಾಗೂ ವಾಷಿಂಗ್ಟನ್ ನಡುವಿನ ಸಂಬಂಧ ಯಾವ ರೀತಿ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ಟ್ರಂಪ್ರ ಪೋಸ್ಟ್ ಅನ್ನು ಹೋಲುವ ಆ ಟ್ವೀಟ್ ಅನ್ನು ಪಾಕ್ ಪ್ರಧಾನಿಗಾಗಿ ವಾಷಿಂಗ್ಟನ್ ಕಚೇರಿಯೇ ಬರೆದುಕೊಟ್ಟಿದೆ ಎಂಬ ಆರೋಪಗಳಿವೆ ಎಂದು ತರೂರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಈ ವೇಳೆ ಅಮೆರಿಕ ಮತ್ತು ಇರಾನ್ ನಡುವೆ ಪಾಕ್ ಮಧ್ಯಸ್ಥಿಕೆ ಕುರಿತು ಮಾತನಾಡಿದ ತರೂರ್, ಪಾಕಿಸ್ತಾನ ಇರಾನ್ನೊಂದಿಗೆ 900 ಕಿ.ಮೀ ಗಡಿ ಹಂಚಿಕೊಂಡಿದೆ.ಆ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಯಾ ಜನಸಂಖ್ಯೆ ಜನರಿದ್ದಾರೆ. ಒಂದು ವೇಳೆ ಯುದ್ಧ ತೀವ್ರಗೊಂಡರೆ ನಿರಾಶ್ರಿತರ ಮೊದಲ ಅಲೆಯನ್ನು ಪಾಕಿಸ್ತಾನವೇ ಎದುರಿಸಬೇಕಾದೀತು. ಹಾಗಾಗಿ ಇಲ್ಲಿ ಅವರ ಅನಿವಾರ್ಯತೆ ಭಾರತದ ಹಿತಾಸಕ್ತಿಗಳು ಭಿನ್ನವಾಗಿದ್ದು, ಈ ವಿಷಯದಲ್ಲಿ ಭಾರತ ಯಾವುದೇ ರೀತಿಯ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಹೇಳಿದರು.
ಈ ಯುದ್ದದಿಂದ ಭಾರತದ ಇಂಧನದ ಪೂರೈಕೆ ಮೇಲೆ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿರುವ ಒಂದು ಕೋಟಿಗೂ ಹೆಚ್ಚು ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ನಮಗೆ ಇಲ್ಲಿ ಶಾಂತಿ ಮುಖ್ಯವಾಗಿದ್ದು, ಅದನ್ನು ನಾವು ಮೌನವಾಗಿಯೂ ಸಾಧಿಸಬಹುವುದು ಹಾಗೂ ರಾಜತಾಂತ್ರಿಕವಾಗಿ ಕೊಡುಗೆಯಾಗಬಲ್ಲದು. ಆ ನಿರ್ಧಾರ ಸಂಪೂರ್ಣ ಭಾರತ ತಾನೇ ನಿರ್ಧರಿಸಬೇಕು ಎಂದು ತರೂರ್ ಹೇಳಿದರು.



