ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋದಲ್ಲಿ ಮುಂದುವರಿಯುತ್ತಿರುವ ಕಾರ್ಯಾಚರಣೆಯ ಅಸ್ತವ್ಯಸ್ತತೆ ಇದೀಗ ರಾಜಕೀಯ ಹಾಗೂ ಆಡಳಿತಾತ್ಮಕ ಮಟ್ಟದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿದೆ. ಎಂಟನೇ ದಿನಕ್ಕೂ ವಿಮಾನಗಳ ರದ್ದತಿ ಹಾಗೂ ವಿಳಂಬ ಮುಂದುವರಿದಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರ ತೊಂದರೆ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.
ಈ ಹಿನ್ನೆಲೆ ಎನ್ಡಿಎ ಸಂಸದರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಯಮಗಳು ಜನರಿಗಾಗಿ ಇರಬೇಕು, ಜನರಿಗೆ ಕಿರಿಕಿರಿ ಉಂಟುಮಾಡುವಂತಾಗಬಾರದು ಎಂದು ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿಯವರ ಹೇಳಿಕೆಯನ್ನು ಉಲ್ಲೇಖಿಸಿ ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ಸಾಮಾನ್ಯ ನಾಗರಿಕರ ಜೀವನ ಸುಗಮಗೊಳಿಸುವ ದಿಕ್ಕಿನಲ್ಲಿ ಎಲ್ಲ ವಲಯಗಳಲ್ಲಿ ಸುಧಾರಣೆ ಅಗತ್ಯವೆಂದು ಪ್ರಧಾನಿ ಮಾರ್ಗದರ್ಶನ ನೀಡಿದ್ದಾರೆ ಎಂದರು. ಕಾನೂನು ಹಾಗೂ ನಿಯಮಗಳು ಜನರ ಮೇಲೆ ಹೊರೆಯಾಗದೆ, ವ್ಯವಸ್ಥೆಯ ಸುಧಾರಣೆಗೆ ಸಹಕಾರಿಯಾಗಬೇಕೆಂಬುದೇ ಸರ್ಕಾರದ ಆಶಯ ಎಂದು ತಿಳಿಸಿದರು.

