ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಹಿಣಿ ನೀಲೇಕಣಿ ಅವರು ಕರ್ನಾಟಕ ಸರ್ಕಾರದ ಮೃಗಾಲಯ ಪ್ರಾಧಿಕಾರದ ಭಾಗವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಜೊತೆ ಝೂ ವ್ಯಾಪ್ತಿಯಲ್ಲಿ 25 ಮೀಟರ್ ಎತ್ತರದ ಸಾರ್ವಜನಿಕ ವೀಕ್ಷಣಾ ಟವರ್ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
5 ಕೋಟಿ ಅನುದಾನದಲ್ಲಿ ಪಾಲುದಾರಿಕೆಯ ಈ ಯೋಜನೆಯು ಪರಿಸರ ಆಧಾರಿತ ಕಲಿಕೆ. ಪರಿಸರ ರಕ್ಷಣೆ ಜಾಗೃತಿ ಹೆಚ್ಚಿಸುವ ಹಾಗೂ ಭಾರತದ ಪ್ರಮುಖ ವನ್ಯಜೀವಿ ಮತ್ತು ಇಕೋ ಟೂರಿಸಮ್ನಲ್ಲಿ ಸಂದರ್ಶಕರ ಅನುಭವ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನವು ವಾರ್ಷಿಕವಾಗಿ 2.2 ಮಿಲಿಯನ್ ಸಂದರ್ಶಕರನ್ನು ಸೆಳೆಯುತ್ತಿದ್ದು ವನ್ಯಜೀವಿ ರಕ್ಷಣೆ, ಅಧ್ಯಯನ ಮತ್ತು ಸಾರ್ವಜನಿಕ ಶಿಕ್ಷಣದಲ್ಲಿ ಮಹತ್ವದ ಪಾತ್ರವಹಿಸಿದೆ. ಪ್ರಸ್ತಾಪಿಸಲಾದ ಸಾರ್ವಜನಿಕ ವೀಕ್ಷಣಾ ಟವರ್ ಉದ್ಯಾನವನಕ್ಕೆ ಹೊಸ ಸೇರ್ಪಡೆಯಾಗಿ ಸುರಕ್ಷಿತವಾಗಿ ವನ್ಯಜೀವಿ ವೀಕ್ಷಣೆ ಹಾಗೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಬೆಂಗಳೂರು ಸ್ಕೈಲೈನ್ನ ವಿಹಂಗಮ ನೋಟವನ್ನು ಪ್ರವಾಸಿಗರಿಗೆ ನೀಡುತ್ತದೆ. ಒಂದು ಬಾರಿಗೆ 50-70 ಜನರಿಗೆ ವೀಕ್ಷಣೆಯ ಸೌಲಭ್ಯವನ್ನು ನೀಡಲು ವಿನ್ಯಾಸಗೊಳಿಸಲಾಗಿದ್ದು , ಸುಸ್ಥಿರ ಸೌಲಭ್ಯಗಳಾದ ಸೌರ ಶಕ್ತಿ , ಮಳೆ ನೀರು ಕೊಯ್ಲಿ ಹಾಗೂ ಪರಿಸರ ಸ್ನೇಹಿ ಮೂಲಸೌಕರ್ಯವನ್ನು ಕಲ್ಪಿಸಲಾಗಿದೆ.
ಪರಿಸರದ ಜತೆ ಸಂಪರ್ಕ ಬೇಕು
ಈ ಬಗ್ಗೆ ಮಾತನಾಡಿದ ರೋಹಿಣಿ ನೀಲೇಕಣಿ ಫಿಲಾನ್ಥ್ರೋಫಿಸ್ನ ಚೇರ್ಪರ್ಸನ್ ರೋಹಿಣಿ ನೀಲೇಕಣಿ“ ಸಾರ್ವಜನಿಕ ಸಂಸ್ಥೆಗಳಾದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಜನರಿಗೆ ವಿದ್ಯಾರ್ಥಿಯಂತೆ, ಟ್ರಸ್ಟಿಯಂತೆ ಹಾಗೂ ವೀಕ್ಷಕರಂತೆ ಪರಿಸರದ ಜೊತೆ ಸಂಪರ್ಕ ಸಾಧಿಸಲು ಇರುವ ಪ್ರಮುಖ ಪ್ರದೇಶವಾಗಿದೆ. ಪ್ರಕೃತಿಯ ಜೊತೆ ನಮ್ಮ ನಿತ್ಯದ ಸಂಪರ್ಕ ಕುಸಿಯುತ್ತಿದ್ದಂತೆ ಅನುಭವಗಳನ್ನು ಹಂಚಿಕೊಳ್ಳುವುದರ ಮೂಲಕ, ಕತೆಗಳನ್ನು ಹಂಚಿಕೊಳ್ಳುವುದರ ಮೂಲಕ, ಪರಿಸರದ ಜೊತೆ ಸಂಪರ್ಕ ಹೊಂದುವುದರ ಮೂಲಕ ಪುನಃ ನಿರ್ಮಿಸಬೇಕಾಗುತ್ತದೆ. ಈ ಟವರ್ ಕುತೂಹಲವನ್ನು ಹೆಚ್ಚಿಸಿ ಪರಿಸರದೆಡೆಗಿನ ಕಾಳಜಿಯನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದೇನೆ ಎಂದರು.
ಈ ಯೋಜನೆಯು ಪರಿಸರ ರಕ್ಷಣೆ ಕೇಂದ್ರಿತ ವಿಷಯಗಳು ಸೇರಿ ಶೈಕ್ಷಣಿಕ ವೈಶಿಷ್ಟ್ಯಗಳು ಮತ್ತು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ವೀಕ್ಷಕರ ಅನುಭವಗಳನ್ನು ಹೊಂದಿದೆ . ಜೊತೆಗೆ ಈ ಯೋಜನೆಯು ಸುಸ್ಥಿರ ಪ್ರವಾಸೋದ್ಯಮ ಹಾಗೂ ಸ್ಥಳೀಯ ಜೀವನೋಪಾಯ ಸೃಷ್ಟಿಸುವ ಗುರಿಯನ್ನೂ ಹೊಂದಿದೆ.
ಕಲಿಕೆಯ ಅನುಭವ ಹೆಚ್ಚಳ
ಯೋಜನೆ ಕುರಿತು ಮಾತನಾಡಿದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಎ ವಿ ಸೂರ್ಯ ಸೇನ್ , ಐಎಫ್ಎಸ್ ಈ ಪಾಲುದಾರಿಕೆಯು ಸಂರಕ್ಷಣೆ, ಶಿಕ್ಷಣ ಮತ್ತು ಸುಸ್ಥಿರ ಪ್ರವಾಸೋದ್ಯಮದೆಡೆಗಿನ ನಮ್ಮ ಬದ್ದತೆಯನ್ನು ಬಲಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಪ್ರಸ್ತಾಪಿತ ಟವರ್ ಪರಿಸರ ಆಧಾರಿತ ಕಲಿಕೆಯ ಮೂಲಕ ಸಂದರ್ಶಕರ ಅನುಭವವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಪರಿಸರ ಸ್ನೇಹಿ ಮೂಲಸೌಕರ್ಯದೆಡೆಗೆ ಬದ್ದತೆಯ ಪ್ರತೀಕವಾಗಿ ನಿಲ್ಲಲಿದೆ. ರೋಹಿಣಿ ನೀಲೇಕಣಿ ಫಿಲಾನ್ಥ್ರೋಫಿಸ್ ನ ಬೆಂಬಲದೊಂದಿಗೆ ನಮ್ಮ ನೈಸರ್ಗಿಕ ಪರಂಪರೆಯನ್ನು ಕಾಪಾಡುವುದರ ಜೊತೆಗೆ ಲಕ್ಷಾಂತರ ಸಂದರ್ಶಕರನ್ನು ವನ್ಯಜೀವಿ ಸಂರಕ್ಷಣೆಯತ್ತ ಪ್ರೇರೇಪಿಸಲು ನಾವು ಮತ್ತಷ್ಟು ಸಬಲರಾಗಿದ್ದೇವೆ ಎಂದರು.



