Sunday, October 5, 2025

ಟ್ಯಾಬ್ಲೋ ಧ್ವನಿವರ್ಧಕಕ್ಕೆ ತಡೆ: ಶೋಭಾಯಾತ್ರೆ ಸ್ಥಗಿತಗೊಳಿಸಿ ಠಾಣೆ ಮುಂದೆ ಸಾರ್ವಜನಿಕರ ಪ್ರತಿಭಟನೆ

ಹೊಸದಿಗಂತ ವರದಿ ಉಳ್ಳಾಲ:

ಕಳೆದ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದ ದಸರಾ ಶೋಭಾಯಾತ್ರೆಯಲ್ಲಿ ಮಧ್ಯರಾತ್ರಿ ಆಗುತ್ತಿದ್ದಂತೆ ಪೊಲೀಸರು ಟ್ಯಾಬ್ಲೋಗಳ ಧ್ವನಿವರ್ಧಕಗಳನ್ನ ಸ್ಥಗಿತಗೊಳಿಸಿದ್ದು ಈ ವೇಳೆ ಪೋಲೀಸರು ಮತ್ತು ಸಾರ್ವಜನಿಕರ ನಡುವೆ ಘರ್ಷಣೆ ನಡೆದಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮೂವರು ಯುವಕರನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತರನ್ನ ಕೂಡಲೇ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಶೋಭಾಯಾತ್ರೆಯನ್ನ ಸ್ಥಗಿತಗೊಳಿಸಿ ಠಾಣೆಯ ಎದುರಲ್ಲೇ ಪ್ರತಿಭಟನೆ ನಡೆಸಿದ್ದು, ಬಿಜೆಪಿ ಮುಖಂಡರ ಮಧ್ಯ ಪ್ರವೇಶದಿಂದ‌ ಪೊಲೀಸರು ತಪ್ಪಿತಸ್ಥರಲ್ಲದ ಇಬ್ಬರು ಯುವಕರನ್ನ ಬಿಡುಗಡೆಗೊಳಿಸಿದ ಪರಿಣಾಮ ಉದ್ರಿಕ್ತಗೊಂಡಿದ್ದ ವಾತಾವರಣ ತಿಳಿಗೊಂಡು ಶೋಭಾಯಾತ್ರೆಯು ಸಮಾಪಣಗೊಂಡಿದೆ.

ಉಳ್ಳಾಲದ ಶಾರದಾ ನಿಕೇತನದಲ್ಲಿ ಪೂಜಿಸಲ್ಪಟ್ಟ ಸಾರ್ವಜನಿಕ ಶಾರದಾ ಮಾತೆಯ ಜಲಸ್ಥಂಭನದ ಪ್ರಯುಕ್ತ ನಡೆದ ಶೋಭಾಯಾತ್ರೆಯು ಉಳ್ಳಾಲ ಪೇಟೆ, ವಿದ್ಯಾರಣ್ಯ ನಗರ , ಚೀರುಂಭ ಭಗವತೀ ಕ್ಷೇತ್ರದ ಒಳ‌ರಸ್ತೆಯಾಗಿ ಉಳ್ಳಾಲ ಪೊಲೀಸ್ ಠಾಣೆಯ ಬಳಿಯ ಅಬ್ಬಕ್ಕ ವೃತ್ತಕ್ಕೆ ಬಂದಿತ್ತು. ಕೆಲ ಟ್ಯಾಬ್ಲೋಗಳು ಠಾಣೆಯ ಮುಂಭಾಗದಿಂದ ಹಾದು ಹೋಗಿದ್ದು, ರಾತ್ರಿ ಒಂದು ಗಂಟೆ ವೇಳೆಗೆ ಪೊಲೀಸರು ಬಾಕಿ ಉಳಿದ ಟ್ಯಾಬ್ಲೋಗಳ ಧ್ವನಿವರ್ಧಕಗಳನ್ನ ಸ್ಥಗಿತಗೊಳಿಸಿದ್ದಾರೆ.

ಈ ವೇಳೆ ನೆರೆದಿದ್ದ ಯುವಕರು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಕ್ಷಿತ್ , ಆಶಿಶ್ ಮತ್ತು ಅಶ್ವತ್ಥ್ ಎಂಬ ಮೂವರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು ಉಳ್ಳಾಲ ಠಾಣೆಯಲ್ಲಿರಿಸಿದ್ದರು. ಈ ವೇಳೆ ಉದ್ರಿಕ್ತ ಜನರು ಶೋಭಾಯಾತ್ರೆಯನ್ನ ಸ್ಥಗಿತಗೊಳಿಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ ಮಹಿಳೆಯರು ಬಂಧಿತ ಯುವಕರನ್ನ ಬಿಡುಗೊಳಿಸಿದರೆ ಮಾತ್ರ ಶೋಭಾಯಾತ್ರೆ ನಡೆಸುವುದಾಗಿ ಪ್ರತಿಭಟಿಸಿ ಘೋಷಣೆ ಕೂಗಿದ್ದಾರೆ. ತಕ್ಷಣವೇ ಠಾಣೆಗೆ ಭೇಟಿ ನೀಡಿದ ಡಿಸಿಪಿ ಮಿಥುನ್ ಹೆಚ್.ಎನ್ ಅವರು ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನ ಕರೆಸಿಕೊಂಡಿದ್ದಾರೆ. ಶಾರದೋತ್ಸವ ಆಯೋಜಕರಲ್ಲಿ ಡಿಸಿಪಿ ಮಿಥುನ್ ಅವರು ಮಾತುಕತೆ ನಡೆಸಿದ್ದು , ಆಯೋಜಕರಿಂದಲೂ ಪ್ರತಿಭಟನಾಕಾರರ ಮನವೊಲಿಸಲು ಸಾಧ್ಯವಾಗಿಲ್ಲ.

ಮಧ್ಯರಾತ್ರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಮುಖಂಡರಾದ ಸಂತೋಷ್ ಬೋಳಿಯಾರ್ , ಮೊಗವೀರ ಸಮಾಜದ ಅಧ್ಯಕ್ಷ ಯಶವಂತ ಅಮೀನ್ ಠಾಣೆಗೆ ಆಗಮಿಸಿ ಡಿಸಿಪಿ ಅವರಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿಸಿಪಿಯವರು ಬಂಧಿತರಲ್ಲಿ ರಕ್ಷಿತ್ ಎಂಬಾತನ ವಿರುದ್ಧ ಈ ಹಿಂದೆಯೇ ಪ್ರಕರಣಗಳಿದ್ದು,ಆತ ಪೊಲೀಸರನ್ನ ಅವಾಚ್ಯವಾಗಿ ನಿಂದಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ತಪ್ಪಿತಸ್ಥರಲ್ಲದ ಉಳಿದ ಇಬ್ಬರು ಯುವಕರನ್ನ ಬಿಟ್ಟು ಕಳುಹಿಸುತ್ತೇವೆ, ಶೋಭಾಯಾತ್ರೆ ಮುಂದುವರಿಸುವಂತೆ ಬಿಜೆಪಿ ನಾಯಕರಲ್ಲಿ ವಿನಂತಿಸಿದ್ದಾರೆ. ಬಿಜೆಪಿ ನಾಯಕರ ಮಧ್ಯಸ್ಥಿಕೆಯಲ್ಲಿ ಇಂದು ಮುಂಜಾನೆ 4.30 ಗಂಟೆ ವೇಳೆ ಶಾರದಾ ಮಾತೆಯ ಶೋಭಾಯಾತ್ರೆಯು ಮುಂದುವರಿದಿದೆ.

ಎಸಿಪಿಯಿಂದ ಮತ್ತೆ ಗೊಂದಲ

ಡಿಸಿಪಿಯ ಮಾತಿನ ಮೇರೆಗೆ ಬಿಜೆಪಿ ನಾಯಕರು ಠಾಣೆಯೊಳಗಡೇ ಕೂತು ಆಶಿಶ್ ಮತ್ತು ಅಶ್ವತ್ಥ್ ಅವರ ಬಿಡುಗಡೆಗಾಗಿ ಕಾಯುತ್ತಿದ್ದರು. ಶೋಭಾಯಾತ್ರೆ ಮತ್ತು ಡಿಸಿಪಿ ಸ್ಥಳದಿಂದ ತೆರಳಿದ ನಂತರ ಠಾಣೆಯೊಳಗೆ ಬಂದ ಎಸಿಪಿ ವಿಜಯ ಕ್ರಾಂತಿ ಅವರು ಬಂಧಿತ ಮೂವರಲ್ಲದೆ, ಪ್ರತಿಭಟನೆ ನಡೆಸಿದ ಎಂಭತ್ತರಿಂದ , ನೂರರಷ್ಟು ಜನರ ವಿರುದ್ಧ ಕಾನೂನು ಪ್ರಕಾರ ಎಫ್ಐಆರ್ ದಾಖಲಿಸುವುದಾಗಿ ಬಿಜೆಪಿ ಮುಖಂಡರಲ್ಲಿ ಹೇಳಿಕೊಂಡಿದ್ದಾರೆ. ಈ ವೇಳೆ ತೀವ್ರ ಆಕ್ರೋಶಗೊಂಡ ಬಿಜೆಪಿ ಮುಖಂಡರು ಠಾಣೆಯಿಂದ ಹೊರನಡೆದಿದ್ದಾರೆ. ಮತ್ತೆ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಎಚ್ಚೆತ್ತ ಎಸಿಪಿ ಇಬ್ಬರು ಯುವಕರನ್ನ ಬಿಟ್ಟು ಕಳುಹಿಸಿದ್ದಾರೆ. ಕಳೆದ ತೊಕ್ಕೊಟ್ಟುವಿನ ಮೊಸರು ಕುಡಿಕೆ ಉತ್ಸವದ ಘರ್ಷಣೆಯಲ್ಲೂ ಉಳ್ಳಾಲ ಪೊಲೀಸರು ಅಮಾಯಕರನ್ನ ಬಂಧಿಸಿದ ಆರೋಪ ಕೇಳಿ ಬಂದಿತ್ತು. ಎಸಿಪಿಯಿಂದ ಹಿಡಿದು ಉಳ್ಳಾಲದ ಬಹುತೇಕ ಪೊಲೀಸ್ ಅಧಿಕಾರಿಗಳು ಹೊಸ ಮುಖಗಳಾಗಿದ್ದು, ಸ್ಥಳೀಯರಲ್ಲಿ ಸಂವಹನದ ಅಂತರ, ಸಂಯಮದ ಕೊರತೆಯಿಂದಾಗಿ ಸಣ್ಣ ಪುಟ್ಟ ಘರ್ಷಣೆಗಳಲ್ಲಿ ನೈಜ ಆರೋಪಿಗಳನ್ನ ಗುರುತಿಸುವಲ್ಲಿ ಎಡವುತ್ತಿರುವ ಬಗ್ಗೆ ನಿನ್ನೆಯ ಘಟನೆ ಸ್ಪಷ್ಟ ನಿದರ್ಶನವಾಗಿದೆ.

ಪೊಲೀಸರಿಗೆ ಮಂಗಳಾರತಿ ಅವಕಾಶ ನಿರಾಕರಣೆ:
ದಸರಾ ಶೋಭಾಯಾತ್ರೆಯಲ್ಲಿ ಉಳ್ಳಾಲ ಪೊಲೀಸರು ಠಾಣೆಯ ಮುಂಭಾಗದಲ್ಲಿ ಶಾರದಾ ಮಾತೆಗೆ ಹೂಹಣ್ಣು ಸಮರ್ಪಿಸಿ ಮಂಗಳಾರತಿ ಸಲ್ಲಿಸುವುದು ವಾಡಿಕೆಯಾಗಿದೆ. ಇದೇ ಮೊದಲ ಬಾರಿ ಪೊಲೀಸರ ಮೇಲೆ ಅಸಮಧಾನಗೊಂಡಿದ್ದ ಶಾರದೆಯ ಪಲ್ಲಕ್ಕಿ ಹೊತ್ತಿದ್ದ ಭಜಕರ ತಂಡವು ಪೊಲೀಸ್ ಠಾಣೆಯ ಮುಂದೆ ಮಂಗಳಾರತಿಗೆ ಅವಕಾಶ ನೀಡದೆ ಮುನ್ನಡೆದಿದ್ದಾರೆ.

ಸೇವಂತಿಗುಡ್ಡೆಯ ರಕ್ಷಿತ್ ಶೆಟ್ಟಿ (27) ಎಂಬವರ ವಿರುದ್ಧ ಪಿಎಸ್ ಐ ಕೃಷ್ಣ ಅವರ ದೂರಿನ ಮೇರೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದರ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ.