March 12, 2026
Thursday, March 12, 2026
spot_img

ಪುಣೆ-ಬೆಂಗಳೂರು ಆರು ಪಥಗಳ ಕಾಮಗಾರಿ ಅಂತಿಮ, ಶೀಘ್ರದಲ್ಲೇ ಓಪನ್: ಸಂಸದ ಈರಣ್ಣ ಕಡಾಡಿ

ಹೊಸದಿಗಂತ ವರದಿ ​ಬೆಳಗಾವಿ:

ಬೆಳಗಾವಿ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-48 ರ ಪುಣೆ-ಬೆಂಗಳೂರು ವಿಭಾಗದ ಆರು ಪಥಗಳ ಕಾಮಗಾರಿಯು ಬೆಳಗಾವಿಯಿಂದ ಸಂಕೇಶ್ವರ ಬೈಪಾಸ್‌ವರೆಗಿನ 40 ಕಿ.ಮೀ ರಸ್ತೆಯು ಶೇ. 98.10 ರಷ್ಟು ಪೂರ್ಣಗೊಂಡಿದ್ದು, ಮಾರ್ಚ್ 31.ರೊಳಗೆ ಪೂರ್ಣಗೊಳ್ಳಲಿದೆ. ಹಾಗೂ ಸಂಕೇಶ್ವರ ಬೈಪಾಸ್‌ನಿಂದ ಮಹಾರಾಷ್ಟ್ರ ಗಡಿಯವರೆಗಿನ 37.83 ಕಿ.ಮೀ ಉದ್ದದ ಕಾಮಗಾರಿಯು ಶೇ 78.10% ಪ್ರಗತಿಯಲ್ಲಿದ್ದು ಅಕ್ಟೋಬರ್ 31, 2026 ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಶೀಘ್ರದಲ್ಲೇ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಬಜೆಟ್‌ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-48 ರ ಆರು ಪಥದ ಕಾಮಗಾರಿಯ ಪ್ರಗತಿ, ಕಿತ್ತೂರು ಮತ್ತು ಸಂಕೇಶ್ವರನಲ್ಲಿ ಮೇಲ್ಸೇತುವೆಗಳ ನಿರ್ಮಾಣ, ಟೋಲ್ ಪ್ಲಾಜಾಗಳಲ್ಲಿನ ದಟ್ಟಣೆ ನಿಯಂತ್ರಣ, ಭೂಸ್ವಾಧೀನದ ಸ್ಥಿತಿ ಮತ್ತು ಯೋಜನೆಯ ಪೂರ್ಣಗೊಳ್ಳುವ ಸಮಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆಳಗಾವಿ – ಧಾರವಾಡ ವಿಭಾಗ: 79.36 ಕಿ.ಮೀ ಉದ್ದದ ಈ ಮಾರ್ಗದ ಕಾಮಗಾರಿ ಈಗಾಗಲೇ 100% ಪೂರ್ಣಗೊಂಡಿದ್ದು, ನಿರ್ವಹಣಾ ಹಂತದಲ್ಲಿದೆ. ಕಿತ್ತೂರಿನಲ್ಲಿ ಪಾದಚಾರಿ ಮತ್ತು ವಾಹನ ಸಂಚಾರಕ್ಕಾಗಿ ಪ್ರತ್ಯೇಕ ಅಂಡರ್‌ಪಾಸ್‌ಗಳು ಪೂರ್ಣಗೊಂಡಿವೆ. ಸಂಕೇಶ್ವರನಲ್ಲಿ ವಾಹನಗಳ ಅಂಡರ್‌ಪಾಸ್ ಕಾಮಗಾರಿ ಮುಕ್ತಾಯಗೊಂಡಿದ್ದು, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.

ಇದನ್ನೂ ಓದಿ:

ಹೆದ್ದಾರಿ ವಿಸ್ತರಣೆಗಾಗಿ ಜಮೀನು ನೀಡಿದ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಬೆಳಗಾವಿ-ಸಂಕೇಶ್ವರ ವಿಭಾಗದಲ್ಲಿ 102.73 ಕೋಟಿ ರೂ. ಮತ್ತು ಸಂಕೇಶ್ವರ-ಮಹಾರಾಷ್ಟ್ರ ಗಡಿ ವಿಭಾಗದಲ್ಲಿ 210.79 ಕೋಟಿ ರೂ.ಗಳನ್ನು ಪರಿಹಾರವಾಗಿ ವಿತರಿಸಲಾಗಿದೆ. ಹೀರೆಬಾಗೇವಾಡಿ, ಹತ್ತರಗಿ ಮತ್ತು ಕೋಗನೊಳ್ಳಿ ಟೋಲ್ ಪ್ಲಾಜಾಗಳಲ್ಲಿ ದಟ್ಟಣೆ ಕಡಿಮೆ ಮಾಡಲು ‘ಹೈಬ್ರಿಡ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್’ ವ್ಯವಸ್ಥೆ ಸೇರಿದಂತೆ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !