January20, 2026
Tuesday, January 20, 2026
spot_img

ಪ್ರಧಾನಿ ಮೋದಿ ಭೇಟಿಯಾದ ರಾಜ್ಯಸಭಾ ಸದಸ್ಯ ಕಮಲ್ ಹಾಸನ್: ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ, ಮಕ್ಕಳ್ ನೀದಿ ಮೈಯಂ ನಾಯಕ ,ರಾಜ್ಯಸಭಾ ಸದಸ್ಯ ಕಮಲ್ ಹಾಸನ್ ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ಕೀಲಾದಿಯ ಉತ್ಖನನವನ್ನು ಒಪ್ಪಿಕೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರಧಾನಿ ಮೋದಿಯವರ ಮುಂದಿಟ್ಟಿದ್ದಾರೆ.

ಈ ಬಗ್ಗೆ ಅವರು ಎಕ್ಸ್ ನಲ್ಲಿ ಬರೆದ ಪೋಸ್ಟ್ ನಲ್ಲಿ, ‘ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿದೆ. ಒಬ್ಬ ಕಲಾವಿದನಾಗಿ ಮತ್ತು ತಮಿಳುನಾಡಿನ ಪ್ರತಿನಿಧಿಯಾಗಿ ಅವರಲ್ಲಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದೇನೆ. ಅವುಗಳಲ್ಲಿ ಮುಖ್ಯವಾದದ್ದು ಕೀಲಾದಿ . ತಮಿಳಿನ ಪುರಾತನತೆಯನ್ನು, ತಮಿಳು ನಾಗರಿಕತೆಯ ಹೆಮ್ಮೆಯನ್ನು ಜಗತ್ತಿಗೆ ತಿಳಿಸುವ ತಮಿಳರ ಪ್ರಯತ್ನಗಳಿಗೆ ಪ್ರಧಾನಿ ಬೆಂಬಲ ನೀಡಬೇಕೆಂದು ಕೇಳಿಕೊಂಡಿದ್ದೇನೆ’ ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಂ ಡಿಎಂಕೆಗೆ ಬೆಂಬಲ ನೀಡಿದ್ದರಿಂದ, ಪ್ರತಿಯಾಗಿ ಡಿಎಂಕೆ ಪರವಾಗಿ ಕಮಲ್ ಹಾಸನ್ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಶಿವಗಂಗಾ ಜಿಲ್ಲೆಯಲ್ಲಿರುವ ಕೀಲಾದಿ ನಾಗರಿಕತೆ ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿದ್ದೆಂದು ನಂಬಲಾಗಿದೆ. ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಉತ್ಖನನ ನಡೆಸಿದ್ದು, ಪುರಾತತ್ವ ತಜ್ಞ ಅಮರನಾಥ ರಾಮಕೃಷ್ಣನ್, 2023ರ ಜನವರಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಆದರೆ ಕೆಲವು ತಿದ್ದುಪಡಿಗಳನ್ನು ಮಾಡಬೇಕೆಂದು ಕೋರಿ ಭಾರತೀಯ ಪುರಾತತ್ವ ಇಲಾಖೆ ಈ ವರದಿಯನ್ನು ವಾಪಸ್ ಕಳುಹಿಸಿತು. ಕೀಲಾದಿ ವರದಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿತು. ಈ ಕೀಲಾದಿ ವಿಚಾರವಾಗಿ ಕಮಲ್ ಹಾಸನ್ ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.

Must Read