Saturday, November 22, 2025

ಪಡಿತರ ಧಾನ್ಯಗಳ ಕಮಿಷನ್‌ ಪರಿಷ್ಕರಣೆ: ಗೋಧಿ, ಜೋಳ, ರಾಗಿ ಕಮಿಷನ್‌ ಸಮಾಂತರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರವು ಪಡಿತರ ಧಾನ್ಯಗಳಾದ ರಾಗಿ, ಜೋಳ ಮತ್ತು ಮೆಕ್ಕೆಜೋಳದ ಕಮಿಷನ್‌ ಅನ್ನು ಸಮಾಂತರವಾಗಿ 27 ರೂ. ಗೆ ಹೆಚ್ಚಿಸಿ ಸೊಸೈಟಿಗಳ ಬಲವರ್ಧನೆಗೆ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (DFPD) ರಚಿಸಿದ ಸಮಿತಿಯು ಪಡಿತರ ಧಾನ್ಯಗಳ ಕಮಿಷನ್‌ ಪರಿಷ್ಕರಣೆಗೆ ಶಿಫಾರಸ್ಸು ಮಾಡಿತ್ತು. ಅದರನ್ವಯ ಪ್ರಧಾನಿ ನರೇಂದ್ರ ಮೋದಿ ಅವರು ಸೊಸೈಟಿಗಳ ಬಲವರ್ಧನೆ ಮತ್ತು ರೈತರಿಗೂ ಹೆಚ್ಚಿನ ಅನುಕೂಲವಾಗುವಂತೆ ಈ ಪಡಿತರ ಧಾನ್ಯಗಳ ಕಮಿಷನ್‌ ಅನ್ನು ಪರಿಷ್ಕರಿಸಿ ದೇಶದ ಪಡಿತರ ವ್ಯವಸ್ಥೆಗೆ ಉತ್ತೇಜನ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದರಿಂದ ಆಯಾ ರಾಜ್ಯಗಳಲ್ಲಿ ಧಾನ್ಯ ಸಂಗ್ರಹಣೆ ಹೆಚ್ಚಳಕ್ಕೆ ಉತ್ತೇಜನ ಸಿಕ್ಕಂತಾಗಿದೆ ಮತ್ತು ಸ್ಥಳೀಯವಾಗಿ ಸೊಸೈಟಿ, ಸಂಘಗಳ ಬಲವರ್ಧನೆಗೆ ಸಹಕಾರಿಯಾಗಲಿದೆ. ಅಲ್ಲದೇ, ಕೇಂದ್ರ ಸರ್ಕಾರದ ಶ್ರೀ ಅನ್ನ ಯೋಜನೆಗೆ ಮತ್ತಷ್ಟು ಬೆಂಬಲ ಸಿಕ್ಕಂತಾಗಿದೆ ಎಂದಿದ್ದಾರೆ.

ಪ್ರತಿ ಕ್ವಿಂಟಲ್‌ಗೆ ₹27 ಕಮಿಷನ್‌
ರಾಜ್ಯಗಳಲ್ಲಿ ಗೋಧಿ, ಜೋಳ, ಮೆಕ್ಕೆಜೋಳ ಮತ್ತು ರಾಗಿ ವಿತರಿಸುವ ಸೊಸೈಟಿಗಳಿಗೆ ಕಮಿಷನ್‌ ಅನ್ನು ಪ್ರತಿ ಕ್ವಿಂಟಲ್‌ಗೆ ₹27ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯಗಳಿಗೆ ಪಾವತಿಸಬೇಕಾದ ಕಮಿಷನ್ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ ₹11.75, ಜೋಳ ಮತ್ತು ರಾಗಿಗೆ ಕ್ವಿಂಟಾಲ್‌ಗೆ ₹15ರವರೆಗಿತ್ತು. ಈಗಿದನ್ನೂ ₹27ಕ್ಕೆ ಪರಿಷ್ಕರಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಾದ PMGKAY, PM ಪೋಷಣ್‌ ಮತ್ತು WBNP ಅಡಿಯಲ್ಲಿ ವಿತರಣೆಯ ಆಹಾರ ಧಾನ್ಯಗಳಿಗೆ ಈ ದರ ನಿಗದಿಪಡಿಸಲಾಗಿದೆ ಎಂದಿದ್ದಾರೆ.

ಸೊಸೈಟಿಗಳಿಗೆ ನೀಡಲಾಗುವ ಕಮಿಷನ್‌ ದರ ಪರಿಶೀಲಿಸಲು DFPD ED (ಹಣಕಾಸು), FCI ಅಧ್ಯಕ್ಷತೆಯಲ್ಲಿ ಇಬ್ಬರು ರಾಜ್ಯ ಆಹಾರ ಕಾರ್ಯದರ್ಶಿಗಳನ್ನು ಸದಸ್ಯರನ್ನಾಗಿ ಹೊಂದಿರುವ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಮೆಕ್ಕೆಜೋಳ, ಜೋಳ, ರಾಗಿ ಕಮಿಷನ್‌ ಅನ್ನು ಗೋಧಿಗೆ ಸಮಾಂತರಗೊಳಿಸಲು ಶಿಫಾರಸು ಮಾಡಿತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ .

error: Content is protected !!