ಮಹಾಶಿವರಾತ್ರಿಯ ಉಪವಾಸದ ಬಗ್ಗೆ ಪ್ರಮುಖವಾಗಿ ಕೇಳಿಬರುವುದು ಬೇಡರ ಕಣ್ಣಪ್ಪನ ಕಥೆ. ತಿಳಿಯದೆಯೇ ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಸುರಿಸುತ್ತಾ, ಇಡೀ ರಾತ್ರಿ ಹಸಿವು-ನಿದ್ದೆ ಮರೆತು ಶಿವನನ್ನು ಪೂಜಿಸಿದ ಬೇಡನಿಗೆ ಮೋಕ್ಷ ಸಿಕ್ಕಿತು ಎಂಬುದು ಈ ದಿನದ ಶ್ರದ್ಧೆಗೆ ಸಾಕ್ಷಿ.
ಇನ್ನೊಂದು ನಂಬಿಕೆಯ ಪ್ರಕಾರ, ಸಮುದ್ರ ಮಥನದ ವೇಳೆ ಉದ್ಭವಿಸಿದ ಹಾಲಾಹಲವನ್ನು ಶಿವನು ಕುಡಿದಾಗ, ವಿಷದ ಪ್ರಭಾವ ತಗ್ಗಿಸಲು ದೇವತೆಗಳೆಲ್ಲರೂ ಶಿವನ ಸ್ತುತಿ ಮಾಡುತ್ತಾ ರಾತ್ರಿಯಿಡೀ ಎಚ್ಚರವಿದ್ದರು. ಅಂದು ಶಿವನಿಗೆ ಯಾವುದೇ ಆಹಾರ ನೀಡದೆ ಉಪಚರಿಸಿದ್ದರಿಂದ, ಅದರ ನೆನಪಿನಲ್ಲಿ ಭಕ್ತರು ಉಪವಾಸ ಮಾಡುತ್ತಾರೆ.
ಶಿವನು ವೈರಾಗ್ಯವನ್ನು ಬಿಟ್ಟು ಪಾರ್ವತಿಯನ್ನು ಮದುವೆಯಾದ ದಿನವಿದು ಎಂಬ ನಂಬಿಕೆಯಿದೆ. ಈ ಶುಭ ಸಂದರ್ಭವನ್ನು ಆಚರಿಸಲು ಭಕ್ತರು ಶ್ರದ್ಧಾ ಭಕ್ತಿಯಿಂದ ಉಪವಾಸ ಮಾಡುತ್ತಾರೆ.
ಉಪವಾಸ ಮತ್ತು ಜಾಗರಣೆಯ ಮಹತ್ವ
‘ಉಪವಾಸ’ ಎಂದರೆ ದೇವರ ಸಮೀಪ ಇರುವುದು ಎಂದರ್ಥ. ಆಹಾರದ ಕಡೆಗೆ ಗಮನ ಹರಿಸದೆ ಮನಸ್ಸನ್ನು ಅಧ್ಯಾತ್ಮದತ್ತ ಕೇಂದ್ರೀಕರಿಸಲು ಇದು ಸಹಕಾರಿ.
ಚಂದ್ರನ ಸ್ಥಾನ ಬದಲಾವಣೆಯಿಂದಾಗಿ ಶಿವರಾತ್ರಿಯಂದು ಮಾನವನ ಶರೀರದಲ್ಲಿ ಶಕ್ತಿಯು ನೈಸರ್ಗಿಕವಾಗಿ ಮೇಲ್ಮುಖವಾಗಿ ಚಲಿಸುತ್ತದೆ. ಈ ಸಮಯದಲ್ಲಿ ಬೆನ್ನೆಲುಬನ್ನು ನೇರವಾಗಿಟ್ಟು (ಜಾಗರಣೆ ಮಾಡಿ) ಉಪವಾಸವಿರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
ಕಾಮ, ಕ್ರೋಧ, ಲೋಭಗಳೆಂಬ ಗುಣಗಳನ್ನು ಮೆಟ್ಟಿ ನಿಂತು ಜ್ಞಾನದ ಕಡೆಗೆ ಸಾಗುವ ಸಂಕೇತವೇ ಈ ಆಚರಣೆ.



