ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಕೇಳಿಬಂದಿರುವ ಅಕ್ರಮದ ಆರೋಪಗಳು ಹಾಗೂ ವ್ಯವಸ್ಥಿತ ಸುಧಾರಣೆಯ ಅಗತ್ಯದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಎಂಟು ಸದಸ್ಯರ ಸರ್ವಪಕ್ಷಗಳ ಸದನ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ಮಾಹಿತಿ ನೀಡಿದ್ದಾರೆ.
ಕೆಪಿಎಸ್ಸಿ ಪರೀಕ್ಷಾ ವ್ಯವಸ್ಥೆಯನ್ನು ಸರಿಪಡಿಸಲು ಈ ಸಮಿತಿಯು ನೀಡುವ ಶಿಫಾರಸುಗಳನ್ನು ಸರ್ಕಾರ ಕಡ್ಡಾಯವಾಗಿ ಜಾರಿಗೆ ತರಲಿದೆ.
ಒಂದೇ ಕೊಠಡಿಯಲ್ಲಿ 11-12 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಮತ್ತು ಒಂದೇ ಕುಟುಂಬದ 3-4 ಮಂದಿ ಅರ್ಹತೆ ಪಡೆದಿರುವ ಬಗ್ಗೆ ಕೇಳಿಬಂದಿದ್ದ ದೂರುಗಳ ಕುರಿತು ಸಚಿವರು ವಿವರಣೆ ನೀಡಿದರು.
ವಿವಾದಿತ ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಕೆಪಿಎಸ್ಸಿ ಈಗಾಗಲೇ ಪರಿಶೀಲಿಸಿದ್ದು, ಅಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಚಟುವಟಿಕೆಗಳು ನಡೆದಿಲ್ಲ ಎಂದು ವರದಿ ನೀಡಿದೆ.
ಅಭ್ಯರ್ಥಿಗಳಾದ ಕಾವ್ಯಾ ಆರ್, ಐಶ್ವರ್ಯ ಆರ್, ನೀಹಾರಿಕಾ ಆರ್ ಹಾಗೂ ಇತರರ ಹೆಸರಿನಲ್ಲಿ ಇನಿಷಿಯಲ್ ಮತ್ತು ಸರ್ನೇಮ್ಗಳು ಸಾಮ್ಯತೆ ಹೊಂದಿವೆಯೇ ಹೊರತು, ಅವರ್ಯಾರೂ ಒಂದೇ ಕುಟುಂಬಕ್ಕೆ ಸೇರಿದವರಲ್ಲ. ಅವರು ಬೇರೆ ಬೇರೆ ಜಿಲ್ಲೆಯವರು ಎಂದು ಸಚಿವರು ಸ್ಪಷ್ಟಪಡಿಸುವ ಮೂಲಕ ಅಕ್ರಮದ ಆರೋಪಗಳನ್ನು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ.



