ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಕೇವಲ ಕೆಲವು ದಿನಗಳು ಬಾಕಿ ಇರುವಂತೆಯೇ, ತಂಡದ ಆಯ್ಕೆ ಕುರಿತ ವಿವಾದ ಮತ್ತೊಮ್ಮೆ ಚರ್ಚೆಯಾಗಿದೆ. ತಂಡದಿಂದ ಹೊರಗುಳಿದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೀಗ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶಮಿ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡದಿರುವುದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಶಮಿ ಅವರು ಕೊನೆಯ ಬಾರಿ ಟೀಮ್ ಇಂಡಿಯಾ ಪರ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದರು. ಆ ವೇಳೆ ಅವರು ಅತ್ಯಧಿಕ ವಿಕೆಟ್ಗಳನ್ನು ಪಡೆದ ಬೌಲರ್ಗಳಲ್ಲಿ ಒಬ್ಬರಾಗಿದ್ದರು. ಆದರೂ ಅವರ ಹೆಸರು ಆಸ್ಟ್ರೇಲಿಯಾ ಪ್ರವಾಸದ ಪಟ್ಟಿಯಿಂದ ಹೊರಗುಳಿಯಿತು. ಈ ನಿರ್ಧಾರದಿಂದ ಶಮಿ ತೀವ್ರ ನಿರಾಶೆಗೊಂಡು ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ.
ರಣಜಿ ಟ್ರೋಫಿ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಮಿ, “ಆಯ್ಕೆ ನನ್ನ ಕೈಯಲ್ಲಿಲ್ಲ. ನಾನು ನಾಲ್ಕು ದಿನಗಳ ರಣಜಿ ಕ್ರಿಕೆಟ್ ಆಡಬಲ್ಲೆನೆಂದರೆ, 50 ಓವರ್ಗಳ ಕ್ರಿಕೆಟ್ಗೂ ಸಿದ್ಧನಾಗಿದ್ದೇನೆ,” ಎಂದು ಹೇಳಿದ್ದಾರೆ. ಜೊತೆಗೆ ಯಾವುದೇ ಫಿಟ್ನೆಸ್ ಸಮಸ್ಯೆಗಳಿದ್ದರೆ, ನಾನು ಬಂಗಾಳ ಪರ ಆಡಬಾರದು. ಇದನ್ನು ಚರ್ಚಿಸುವ ಮೂಲಕ ವಿವಾದವನ್ನು ಹುಟ್ಟುಹಾಕುವ ಅಗತ್ಯವಿಲ್ಲ ಅಂದುಕೊಳ್ಳುತ್ತೇನೆ ಎಂದರು.
2023ರ ವಿಶ್ವಕಪ್ನಲ್ಲಿ ದಾಖಲೆ ಮಟ್ಟದ ಪ್ರದರ್ಶನ ನೀಡಿ ಭಾರತದ ಗೆಲುವಿಗೆ ಮಹತ್ವದ ಪಾತ್ರವಹಿಸಿದ್ದ ಶಮಿ, ಗಾಯದ ಬಳಿಕ ನಿಧಾನವಾಗಿ ಮೈದಾನಕ್ಕೆ ಮರಳುತ್ತಿದ್ದಾರೆ. ಬಂಗಾಳ ಪರ ರಣಜಿ ಟ್ರೋಫಿಯಲ್ಲಿ ಆಡಲು ಸಜ್ಜಾಗಿರುವ ಶಮಿ, “ನನ್ನ ಕೆಲಸ ಕ್ರಿಕೆಟ್ ಆಡುವುದು, ಬಿಸಿಸಿಐ ಕೆಲಸ ಆಯ್ಕೆ ಮಾಡುವುದು,” ಎಂದು ಹೇಳಿದ್ದಾರೆ.