ದಿಗಂತ ವರದಿ ವಿಜಯಪುರ:
ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದ್ದು, ಗ್ರಾಪಂ ಅಧ್ಯಕ್ಷ ದಾರುಣವಾಗಿ ಸಾವಿಗೀಡಾಗಿದ್ದಾನೆ.
ದೇವರನಿಂಬರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ ಬಿರಾದಾರ ಮೇಲೆ, ದುಷ್ಕರ್ಮಿಗಳು
ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಭೀಮನಗೌಡ ಬಿರಾದಾರ ತಲೆ ಹಾಗೂ ಎದೆಗೆ ಗುಂಡುಗಳು ತಗಲಿದ್ದು, ಹಳೇ ವೈಷಮ್ಯದ ಹಿನ್ನೆಲೆ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ಭೀಮನಗೌಡ ಬಿರಾದಾರ ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಪರಮಾಪ್ತನಾಗಿದ್ದು, ಮೂರರಿಂದ ನಾಲ್ಕು ಜನ ಮುಸುಕುಧಾರಿಗಳಿಂದ ಕೃತ್ಯ ನಡೆದಿದೆ. ಗುಂಡು ಹಾರಿಸಿದ ಬಳಿಕ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.
ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಭೀಮನಗೌಡ ಬಿರಾದಾರ ಬಂದಿದ್ದರು. ಈ ವೇಳೆ ಕಟಿಂಗ್ ಮಾಡುವನ ಕಣ್ಣಿಗೆ ಖಾರದ ಪುಡಿ ಎರಚಿ ಕೃತ್ಯ ಮಾಡಲಾಗಿದೆ. ಭೀಮನಗೌಡ ದೇಹವನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.