March 15, 2026
Sunday, March 15, 2026
spot_img

ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ ಶಿಕ್ಷೆ ನೀಡಿದ್ರೆ ಬಿಜೆಪಿಗೆ ಮುಜುಗರ ಯಕಾಗ್ಬೇಕು?: ಪ್ರಹ್ಲಾದ್ ಜೋಶಿ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ವಿಧಿಸಲಾದ ಜೀವಾವಧಿ ಶಿಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, “ಈ ಪ್ರಕರಣ ಬಿಜೆಪಿಗೆ ಯಾವುದೇ ರೀತಿಯ ಮುಜುಗರವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಹಾಕಿದ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್‌ನವರು ಹಲವು ಅಪರಾಧಿಗಳೊಂದಿಗೆ ಇದ್ದ ಹಿನ್ನೆಲೆಯನ್ನು ಉಲ್ಲೇಖಿಸಿ ಪ್ರತಿದ್ವಂದ್ವದ ಮಾತುಗಳನ್ನಾಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಬೀಕೆ ಸಿಂಗ್ ನೇತೃತ್ವದ ಎಸ್‌ಐಟಿ ಉತ್ತಮ ಕೆಲಸ ಮಾಡಿದೆ. ವರ್ಷವೂ ಮುಗಿಯದೊಳಗೆ ತೀರ್ಪು ಬಂದಿದೆ. ರಾಜ್ಯದ ಮಟ್ಟಿಗೆ ಇದು ಐತಿಹಾಸಿಕ ಬೆಳವಣಿಗೆ” ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಹಾಕುತ್ತಿರುವ ಆರೋಪಗಳ ವಿರುದ್ಧ ತಿರುಗೇಟು ನೀಡಿದ ಜೋಶಿ, “ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದಾರೆ, ನ್ಯಾಯಾಲಯ ಶಿಕ್ಷೆ ನೀಡಿದೆ. ಅದು ನ್ಯಾಯದ ಪ್ರಕ್ರಿಯೆ. ಬಿಜೆಪಿಗೆ ಮುಜುಗರ ಯಾಕೆ ಆಗಬೇಕು?” ಎಂದು ಪ್ರಶ್ನಿಸಿದರು. ಜೊತೆಗೆ, “ಕಾಂಗ್ರೆಸ್ ನಾಯಕರು ಖಲಿಸ್ತಾನಿ ಉಗ್ರರ ಜೊತೆ ಕೂಡಿರುವ ಫೋಟೋಗಳು ಇವೆ. ರಾಹುಲ್ ಗಾಂಧಿ ಖಲಿಸ್ತಾನಿ ಬೆಂಬಲಿಗರೊಂದಿಗೆ ಇದ್ದ ದೃಶ್ಯಗಳು ದೃಢವಾಗಿವೆ” ಎಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಕಾಂಗ್ರೆಸ್ ದೇಶದ ಭದ್ರತೆ ವಿರುದ್ಧ ನಡೆದುಕೊಳ್ಳುತ್ತಿದೆ ಎಂಬ ಆರೋಪವನ್ನೂ ಅವರು ಮುಂದಿಟ್ಟರು. ಮತ್ತೊಂದೆಡೆ, “ಕಾಂಗ್ರೆಸ್ ದೇಶದ ಹಿತವನ್ನ ಮರೆತು ಪಾಕಿಸ್ತಾನ ಪರ ನಿಲುವು ತಾಳುತ್ತಿದೆ. ಮಲೆಗಾಂವ್ ಬಾಂಬ್ ಸ್ಫೋಟದ ಪ್ರಕರಣದ ನಂತರ ಹಿಂದೂ ಸಮಾಜದ ವಿರುದ್ಧ ‘ಹಿಂದೂ ಟೆರರಿಸಂ’ ಎಂಬ ಕೃತಕ ಕಥೆ ಸೃಷ್ಟಿಸುವ ಪ್ರಯತ್ನ ನಡೆಸಲಾಯಿತು. ತನಿಖೆ ಸ್ಥಗಿತಗೊಳಿಸಿ, ಆರೋಪಿ ಮುಕ್ತಗೊಳಿಸಲು ಕಾಂಗ್ರೆಸ್ ಪ್ರಯತ್ನಿಸಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಮೂಲಕ, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಆಧರಿಸಿ ಬಿಜೆಪಿ ಮೇಲೆ ಕಾಂಗ್ರೆಸ್ ಹಾಕುತ್ತಿರುವ ರಾಜಕೀಯ ದೂರುಗಳಿಗೆ ಪ್ರಹ್ಲಾದ್ ಜೋಶಿ ಸ್ಪಷ್ಟವಾದ ತಿರುಗೇಟು ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !