ಹೊಸ ದಿಗಂತ ವರದಿ,ಚಿತ್ರದುರ್ಗ:
ಸಿದ್ದರಾಮಯ್ಯ ಅವರಿಂದ ಸಾಲದ ಮೂಟೆಯ ಬಜೆಟ್ ಮಂಡನೆ ಆಗಿದೆ. ಇದರಿಂದ ಹುಟ್ಟುವ ಮಕ್ಕಳ ಮೇಲೂ ಸಾಲ ಹೊರಿಸುವ ಕೆಲಸವಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದರು.
ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಖಜಾನೆ ಖಾಲಿ ಆಗಿದೆ. ಐವತ್ತು ಸಾವಿರ ಹುದ್ದೆ ನೇಮಕಾತಿ ಕೇವಲ ಕುಂಟು ನೆಪವಾಗಿದೆ. ಸಿದ್ದರಾಮಯ್ಯ ಸಾಲದ ಬಜೆಟ್ ನೋಡಿ ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲ. ರಾಜ್ಯ ದಿವಾಳಿಯಾದ ವೇಳೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಏನು ಮಾಡುತ್ತಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಸ್ಥಾನದಿಂದ ಹಿಂದೆ ಸರಿಯುತ್ತಾರೆ ಎಂದು ಭವಿಷ್ಯ ನುಡಿದರು.
ಬಸವರಾಜ ಬೊಮ್ಮಾಯಿರವರ ಆಡಳಿತದಲ್ಲಿ ಎಸ್.ಸಿ., ಎಸ್.ಟಿ. ಮೀಸಲಾತಿ ಹೆಚ್ಚಳ ಮಾಡಿದ್ದರು. ಒಟ್ಟು ಶೇ.೫೦ ರಷ್ಟಿದ್ದ ಮೀಸಲಾತಿಯನ್ನು ಶೇ.೫೬ಕ್ಕೆ ಹೆಚ್ಚಿಸಲಾಯಿತು. ಕಾಂಗ್ರೆಸ್ ಆಡಳಿತದಲ್ಲಿ ಶೇ.೫೦ ಮೀಸಲಾತಿ ನೀಡುವ ಕೆಲಸ ಆಗಿದೆ. ಜನಸಂಖ್ಯೆ ಆಧಾರದ ಮೀಸಲಾತಿ ಪಡೆಯುವುದು ನಮ್ಮ ಹಕ್ಕು. ನಾಗಮೋಹನದಾಸ್ ವರದಿ ಜಾರಿಗೆ ಕ್ರಮ ಕೈಗೊಂಡಿದ್ದೆವು. ಕಾಂಗ್ರೆಸ್ ಸರ್ಕಾರ ಮೀಸಲಾತಿ ಕಸಿಯುವ ದಲಿತ ವಿರೋಧದ ವಿರುದ್ಧ ಉಗ್ರ ಹೋರಾಟ ಮಾಡುವ ನಿಟ್ಟಿನಲ್ಲಿ ತೀರ್ಮಾನಿಸಲಾಗಿದೆ ಎಂದರು.



