Monday, December 15, 2025

‘ವೋಟ್ ಚೋರಿ’ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಧಾನಿ ವಿರುದ್ಧ ಘೋಷಣೆ: ಇದಕ್ಕೂ ನಮಗೂ ಸಂಬಂಧವಿಲ್ಲ ಎಂದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ‘ವೋಟ್ ಚೋರಿ’ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಲಾಗಿದ್ದು, ಈ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಪಕ್ಷವು, ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದೆ.

ರಾಮಲೀಲಾ ಮೈದಾನದಲ್ಲಿ ನಡೆದ ‘ವೋಟ್ ಚೋರಿ’ ವಿರುದ್ಧ ಪ್ರತಿಭಟನಾ ರ್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಜಮಾಯಿಸಿದ್ದರು. ಕೇಂದ್ರ ಮತ್ತು ಭಾರತೀಯ ಚುನಾವಣಾ ಆಯೋಗ (ECI) ಚುನಾವಣೆಗಳನ್ನು ತಿರುಚಲು ಒಪ್ಪಂದ ಮಾಡಿಕೊಂಡಿವೆ ಎಂದು ಆರೋಪಿಸಿದರು.

ಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳ್ನು ಕೂಗಲಾಗಿದ್ದು, ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ.

ಸ್ಥಳದಲ್ಲಿ ಘೋಷಣೆಗಳು ಪ್ರತಿಧ್ವನಿಸುತ್ತಿದ್ದಂತೆ, ಕೆಲವು ಕಾರ್ಯಕರ್ತರು ‘ಮೋದಿ ತೇರಿ ಕಬ್ರಾ ಖುದೇಗಿ, ಆಜ್ ನಹಿ ತೋ ಕಲ್ ಖುದೇಗಿ (ಮೋದಿ, ನಿಮ್ಮ ಸಮಾಧಿಯನ್ನು ಇಂದು ಅಲ್ಲದಿದ್ದರೆ ನಾಳೆ ಅಗೆಯಲಾಗುತ್ತದೆ)’, ಜೊತೆಗೆ “ವೋಟ್ ಚೋರ್, ಗಡ್ಡಿ ಛೋರ್ಡ್” ಎಂದು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಬಂತು.

ವಿವಾದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್, ಘೋಷಣೆಗಳು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂದುತಿಳಿಸಿದರು.

ಇದು ಪಕ್ಷದ ಘೋಷಣೆ ಎಂದು ನಾನು ಭಾವಿಸುವುದಿಲ್ಲ. ಇದು ಸರಿಯಾಗಿ ಅರ್ಥಮಾಡಿಕೊಳ್ಳದ ಕೆಲವು ದಾರಿ ತಪ್ಪಿದ ಕಾರ್ಯಕರ್ತರ ಪರಿಣಾಮವಾಗಿರಬಹುದು. ಪಕ್ಷದ ನಿಜವಾದ ಘೋಷಣೆ ತುಂಬಾ ಸರಳವಾಗಿದೆ ‘ವೋಟ್ ಚೋರ್, ಗಡ್ಡಿ ಛೋರ್ಡ್’ ಎಂದು ಅವರು ಹೇಳಿದರು.

ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಂತಹ ಘೋಷಣೆಗಳು ಕಾಂಗ್ರೆಸ್ ಪಕ್ಷದಿಂದ ಬರಲು ಸಾಧ್ಯವಿಲ್ಲ..ಬಹುಶಃ ಅವರದೇ ಜನರನ್ನು ರ್ಯಾಲಿಗೆ ಕಳುಹಿಸಿರಬಹುದು. ಮಾಧ್ಯಮಗಳಲ್ಲಿ ಇಂತಹ ಘಟನೆಗಳನ್ನು ಎತ್ತಿ ತೋರಿಸುವ ಮೂಲಕ, ಪ್ರಧಾನಿ ಮೋದಿ ಸರ್ಕಾರವು ಮತ ​​ಚೋರಿ ಹೇಗೆ ನಡೆಸುತ್ತಿದೆ ಮತ್ತು ಪ್ರಜಾಪ್ರಭುತ್ವವನ್ನು ಹೇಗೆ ದುರ್ಬಲಗೊಳಿಸಲಾಗುತ್ತಿದೆ ಮತ್ತು ಚುನಾವಣಾ ಆಯೋಗ ಹೇಗೆ ಶಾಮೀಲಾಗಿದೆ ಎಂಬ ವಾಸ್ತವವನ್ನು ಮರೆಮಾಡಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.

error: Content is protected !!