ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯುವಕನೊಬ್ಬ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ಕತ್ತರಿಸಿ ಡ್ರಮ್ನಲ್ಲಿಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಔಷಧ ಮತ್ತು ಮದ್ಯದ ವ್ಯವಹಾರ ನಡೆಸುತ್ತಿದ್ದ 49 ವರ್ಷದ ಮನ್ವೇಂದ್ರ ಸಿಂಗ್ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಹುಡುಕಾಟ ನಡೆಸಿದ್ದ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದು,ಈ ವೇಳೆ ಬ್ಯಾರೆಲ್ನಲ್ಲಿ ವ್ಯಕ್ತಿಯ ದೇಹದ ಭಾಗಗಳು ಪತ್ತೆಯಾಗಿವೆ.ಬಳಿಕ ಮಗ ಅಕ್ಷತ್ ಪ್ರತಾಪ್ ಸಿಂಗ್ನನ್ನು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ .
ಮನ್ವೇಂದ್ರ ಸಿಂಗ್ ತನ್ನ ಮಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಬೇಕೆಂದು ಬಯಸಿದ್ದರು. ಆದರೆ, ಮಗ ಅದಕ್ಕೆ ವಿರೋಧಿಸಿದ್ದ. ಈ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಯುವಕ ಒಮ್ಮೆ ಮನೆಯಿಂದ ಓಡಿಹೋಗಿದ್ದ.ಮತ್ತೆ ಮನೆಗೆ ವಾಪಸ್ ಬಂದಾಗ,ತಂದೆಗೆ ರೈಫಲ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಮೂರನೇ ಮಹಡಿಯಿಂದ ನೆಲ ಮಹಡಿಗೆ ಕೊಂಡೊಯ್ದು, ಖಾಲಿ ಕೋಣೆಯಲ್ಲಿ ತುಂಡರಿಸಿದ್ದಾನೆ.
ಶವ ಪತ್ತೆಯಾದ ನಂತರ, ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡವು ಘಟನಾ ಸ್ಥಳವನ್ನು ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಘಟನೆ ನಡೆದ ಸಮಯದಲ್ಲಿ, ಮನ್ವೇಂದ್ರ ಸಿಂಗ್ ಅವರ ಪತ್ನಿ ಗ್ರಾಮದಲ್ಲಿದ್ದರು, ಅವರ ಮಗಳು ಮನೆಯಲ್ಲಿದ್ದರು. ಆಕೆಯನ್ನು ಬೆದರಿಸಿದ್ದ ಎನ್ನಲಾಗಿದೆ.



