ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ 2026 ಪ್ರಕಟವಾಗುತ್ತಿದ್ದಂತೆಯೇ ಶೇರು ಮಾರುಕಟ್ಟೆಯಲ್ಲಿ ಉಂಟಾದ ತೀವ್ರ ತಲ್ಲಣವೇ ಈ ಬಜೆಟ್ನ ಸ್ವರೂಪವನ್ನು ಹೇಳುತ್ತಿದೆ ಎಂದು ಕಾಂಗ್ರೆಸ್ ನಾಯಕ ಜಿ.ಸಿ. ಚಂದ್ರಶೇಖರ್ ಟೀಕಿಸಿದ್ದಾರೆ.
ಕೇವಲ 15 ನಿಮಿಷಗಳೊಳಗೆ ಶೇರು ಮಾರುಕಟ್ಟೆಯಲ್ಲಿ ಸುಮಾರು 30,000 ಕೋಟಿ ಮೌಲ್ಯ ನಷ್ಟವಾಗಿದೆ ಎಂದು ಅವರು ಹೇಳಿದರು.
ಡಾಲರ್ ಎದುರು ರೂಪಾಯಿ ಮೌಲ್ಯ 100ರ ಗಡಿಗೆ ತಲುಪುತ್ತಿರುವುದು ಯಾವ ರೀತಿಯ ಅಭಿವೃದ್ಧಿ ಎಂದು ಪ್ರಶ್ನಿಸಿದ ಅವರು, ಹಿಂದೆ ಡಾಲರ್ಗೆ ಒಂದು ರೂಪಾಯಿ ಬರುತ್ತದೆ ಎಂದು ಹೇಳಿದ್ದ ಬಿಜೆಪಿ ನಾಯಕರು ಎರಡು ಸೊನ್ನೆ ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕವು ಈ ಬಜೆಟ್ನಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಮಂಡ್ಯ ಕೈಗಾರಿಕಾ ಕಾರಿಡಾರ್ ಘೋಷಣೆ ಬಜೆಟ್ನಲ್ಲಿ ಕಾಣೆಯಾಗಿದ್ದು, ನೀರಾವರಿ ಯೋಜನೆಗಳಲ್ಲಿ ಒಂದನ್ನೂ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹದಾಯಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವಲ್ಲಿ ವಿಫಲರಾಗಿರುವುದರ ಜೊತೆಗೆ, ರಾಯಚೂರಿಗೆ ಏಮ್ಸ್ ತರಲಾಗಿಲ್ಲ ಎಂದರು. 16ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡರೂ, 15ನೇ ಆಯೋಗದಲ್ಲಿ ರಾಜ್ಯಕ್ಕೆ ಆಗಿದ್ದ ಅನ್ಯಾಯವನ್ನು ಸರಿಪಡಿಸಿಲ್ಲ ಎಂದು ಆರೋಪಿಸಿದರು. ಜೊತೆಗೆ ರಾಜ್ಯಗಳಿಗೆ ತೆರಿಗೆ ಹಣ ನೀಡದಿರಲು ಕೇಂದ್ರ ಸರ್ಕಾರ ಸೆಸ್ ಹೆಚ್ಚಿಸುತ್ತಿದೆ ಎಂದು ಕಿಡಿಕಾರಿದರು.



