Thursday, December 18, 2025

ದೆಹಲಿ ಮಾಲಿನ್ಯ ತಡೆಗೆ ಕಠಿಣ ಕ್ರಮ: BS-6 ವಾಹನಗಳಿಗೆ ಮಾತ್ರ ಎಂಟ್ರಿ, ಪೆಟ್ರೋಲ್ ಖರೀದಿಗೆ PUC ಕಡ್ಡಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಮಾಲೀನ್ಯ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಬಿಎಸ್-6 ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದ್ದು, ಪಿಯುಸಿ (Pollution Under Control) ಇಲ್ಲದ ವಾಹನಗಳಿಗೆ ಪೆಟ್ರೋಲ್ ಮಾರಾಟ ನಿಷೇಧಿಸಸಿ ಕಠಿಣ ಕ್ರಮ ಆದೇಶ ಹೊರಡಿಸಿದೆ.

ದೆಹಲಿಯಲ್ಲಿ ವಾಯುಮಾಲಿನ್ಯದ ಬಿಕ್ಕಟ್ಟು ತೀವ್ರಗೊಂಡಿದ್ದು, ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಮಟ್ಟಕ್ಕೆ ತಲುಪಿದ ಹಿನ್ನೆಲೆ ಪರಿಸ್ಥಿತಿ ನಿಭಾಯಿಸಲು ಸುಪ್ರೀಂ ಕೋರ್ಟ್ ಒಂದಷ್ಟು ಕಠಿಣ ಆದೇಶಗಳನ್ನುಹೊರಡಿಸಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಹಳೆಯ ವಾಹನಗಳ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸಿದೆ.

ಬಿಎಸ್-IV ಮತ್ತು ಅದಕ್ಕಿಂತ ಮುಂದುವರೆದ ತಂತ್ರಜ್ಞಾನದ ವಾಹನಗಳನ್ನು ಮಾತ್ರ ಬಲವಂತದ ಕ್ರಮದಿಂದ ವಿನಾಯಿತಿ ನೀಡಲಾಗುವುದು ಎಂಬ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿದೆ.

ಆಗಸ್ಟ್ 12 ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಈ ಪ್ರದೇಶದಲ್ಲಿ 10 ವರ್ಷ ಹಳೆಯ ಡೀಸೆಲ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನಿರ್ದೇಶಿಸಿತ್ತು.

ಬುಧವಾರ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಹಲವಾರು ನಿರ್ದೇಶನಗಳನ್ನು ನೀಡಿದ್ದು, ದೆಹಲಿಯ ಗಡಿಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ರಾಜಧಾನಿಯ ಪ್ರವೇಶ ದ್ವಾರಗಳಲ್ಲಿ ಇರುವ ಒಂಬತ್ತು ಟೋಲ್ ಪ್ಲಾಜಾಗಳನ್ನು ಸ್ಥಳಾಂತರಿಸಲು ಅಥವಾ ತಾತ್ಕಾಲಿಕವಾಗಿ ಮುಚ್ಚಲು ಪರಿಗಣಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಗೆ ಪೀಠವು ಸೂಚಿಸಿತು.

ಇನ್ನು ಇತರ ರಾಜ್ಯಗಳ ಬಿಎಸ್-6 ವಾಹನಗಳಿಗೆ ಮಾತ್ರ ದೆಹಲಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಹೆಚ್ಚುವರಿಯಾಗಿ, ಮಾನ್ಯ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರವಿಲ್ಲದ ವಾಹನಗಳು ಪೆಟ್ರೋಲ್ ಪಂಪ್‌ಗಳಿಂದ ಇಂಧನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಹೊಸ ವ್ಯವಸ್ಥೆಯನ್ನು ಡಿಸೆಂಬರ್ 18 ರಿಂದ ಜಾರಿಗೆ ತರಲಾಗುತ್ತಿದೆ.

ಇವುಗಳಲ್ಲದೇ ಪೆಟ್ರೋಲ್ ಖರೀದಿಗೆ ಪಿಯುಸಿ (Pollution Under Control) ಕಡ್ಡಾಯಗೊಳಿಸಲಾಗಿದ್ದು, ಪೆಟ್ರೋಲ್ ಪಂಪ್‌ಗಳಲ್ಲಿ ಸ್ಥಾಪಿಸಲಾದ ಕ್ಯಾಮೆರಾಗಳು ಪಿಯುಸಿ ಇಲ್ಲದೆ ವಾಹನಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತವೆ ಎಂದು ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

ವ್ಯವಸ್ಥೆಗೆ ಸಂಪರ್ಕಗೊಂಡಿರುವ ಯಂತ್ರಗಳು ಅಂತಹ ವಾಹನಗಳಿಗೆ ಇಂಧನ ತುಂಬಲು ನಿರಾಕರಿಸುತ್ತವೆ. ಸಂಪೂರ್ಣ ಪ್ರಕ್ರಿಯೆಯು ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುತ್ತದೆ. ಯಾವುದೇ ಮಾನವ ಹಸ್ತಕ್ಷೇಪವಿರುವುದಿಲ್ಲ ಎಂದು ಹೇಳಿದರು.

error: Content is protected !!