ಹೊಸ ದಿಗಂತ ವರದಿ, ಮುಂಡಗೋಡ:
ತಾಲೂಕಿನ ಮಳಗಿಯ ಪಂಚವಟಿ ಜವಾಹರ ನವೋದಯ ವಿದ್ಯಾಲಯ ವಸತಿ ಶಾಲೆಗೆ ಶನಿವಾರ ಜಿಲ್ಲಾ ಸರ್ವೇಕ್ಷಣಾಧಿಕಾರಿ ರೇಣುಕಾ ಪ್ರಭು ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದರು.
ಫೆ 4 ರಂದು ಮಧ್ಯಾಹ್ನದ ಬಿಸಿಯೂಟ ಸೇವಿಸಿ ವಾಂತಿ ಭೇದಿ ಹಾಗೂ ಜ್ವರದಿಂದ ಒಟ್ಟು 78 ವಿದ್ಯಾರ್ಥಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಶನಿವಾರ ಒಬ್ಬ ವಿದ್ಯಾರ್ಥಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು ಈತನ ಮಲವನ್ನು ಸ್ಯಾಂಪಲ್ ಪಡೆದು ಕಾರವಾರಗೆ ಕಳುಹಿಸಲಾಗಿದೆ.
ತಾಲೂಕ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ನೇತೃತ್ವದ ತಂಡ ಶುಕ್ರವಾರ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ನೀರು ಮತ್ತು ಆಹಾರದ ಮಾದರಿಯನ್ನು ಸಂಗ್ರಹಿಸಿ ಬೆಳಗಾವಿಯ ಛೀಫ್ ಫುಡ್ ಅನಾಲಿಸ್ಟ್ ಡಿವ್ಹಿಜನ್, ಫುಡ್ ಲ್ಯಾಬೋರೆಟರಿ ಪರೀಕ್ಷಾ ಕೇಂದ್ರಕ್ಕೆ ಕಳಿಸಿದ್ದು ಈ ವರದಿಗಾಗಿ ಕಾಯಲಾಗುತ್ತಿದೆ.
ವಿಷಯ ತಿಳಿದು ಜಿಲ್ಲಾ ಸರ್ವೇಕ್ಷಣಾಧಿಕಾರಿ ರೇಣುಕಾ ಪ್ರಭು ನೇತೃತ್ವದ ಅಧಿಕಾರದ ತಂಡ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿದರು.



