March 25, 2026
Wednesday, March 25, 2026
spot_img

ಡೆಹ್ರಾಡೂನ್‌ನಲ್ಲಿ ವಿದ್ಯಾರ್ಥಿಯ ಹತ್ಯೆ: ‘ಭಯಾನಕ ದ್ವೇಷದ ಅಪರಾಧ’ ಎಂದ ರಾಹುಲ್ ಗಾಂಧಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ತ್ರಿಪುರಾ ವಿದ್ಯಾರ್ಥಿಯ ಹತ್ಯೆಯನ್ನು ‘ಭಯಾನಕ ದ್ವೇಷದ ಅಪರಾಧ’ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಡಿಸೆಂಬರ್ 9 ರಂದು ಡೆಹ್ರಾಡೂನ್‌ನಲ್ಲಿ ನಡೆದಿದ್ದ ಜನಾಂಗೀಯ ನಿಂದನೆಯನ್ನು ವಿರೋಧಿಸಿದ ಪಶ್ಚಿಮ ತ್ರಿಪುರಾ ಜಿಲ್ಲೆಯ ನಂದನ್‌ನಗರದ 24 ವರ್ಷದ MBA ವಿದ್ಯಾರ್ಥಿ ಏಂಜೆಲ್ ಚಕ್ಮಾ ಮೇಲೆ ಆರು ಜನರ ಗುಂಪು ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಡಿಸೆಂಬರ್ 26 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ದ್ವೇಷವು ರಾತ್ರೋರಾತ್ರಿ ಕಾಣಿಸಿಕೊಳ್ಳುವುದಿಲ್ಲ. ಡೆಹ್ರಾಡೂನ್‌ನಲ್ಲಿ ಏಂಜೆಲ್ ಚಕ್ಮಾ ಮತ್ತು ಅವರ ಸಹೋದರ ಮೈಕೆಲ್‌ಗೆ ಏನಾಯಿತು ಎಂಬುದು ಭಯಾನಕ ದ್ವೇಷದ ಅಪರಾಧ ಎಂದಿದ್ದಾರೆ. ವಿಶೇಷವಾಗಿ ನಮ್ಮ ಯುವ ಜನತೆಗೆ ವಿಷಕಾರಿ ಅಂಶಗಳನ್ನು ತುಂಬುವ ಮೂಲಕ ಮತ್ತು ಬೇಜವಾಬ್ದಾರಿತನದ ಹೇಳಿಕೆಗಳಿಂದ ಅದನ್ನು ಸಾಮಾನ್ಯಗೊಳಿಸಲಾಗುತ್ತಿದೆ. ಆಡಳಿತಾರೂಢ ಬಿಜೆಪಿಯ ದ್ವೇಷದ ನಾಯಕತ್ವದಿಂದ ಇದನ್ನು ಸಾಮಾನ್ಯ ಎಂಬಂತೆ ಮಾಡಲಾಗುತ್ತಿದೆ. ಭಾರತವನ್ನು ಗೌರವ ಮತ್ತು ಏಕತೆಯ ಮೇಲೆ ನಿರ್ಮಿಸಲಾಗಿದೆ. ಭಯ ಮತ್ತು ನಿಂದನೆ ಮೇಲೆ ಅಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮದು ಪ್ರೀತಿ ಮತ್ತು ವೈವಿಧ್ಯತೆಯ ದೇಶವಾಗಿದೆ. ನಾವು ಸಹ ಭಾರತೀಯರನ್ನು ಗುರಿಯಾಗಿಟ್ಟುಕೊಂಡು ದೂರ ನೋಡುವ ಸತ್ತ ಸಮಾಜವಾಗಬಾರದು. ನಮ್ಮ ದೇಶ ಏನಾಗಲು ಅವಕಾಶ ನೀಡುತ್ತಿದ್ದೇವೆ ಎಂಬುದನ್ನು ನಾವು ಪ್ರತಿಬಿಂಬಿಸಬೇಕು ಮತ್ತು ಎದುರಿಸಬೇಕು. ನನ್ನ ಆಲೋಚನೆಗಳು ಚಕ್ಮಾ ಕುಟುಂಬ ಮತ್ತು ತ್ರಿಪುರಾ ಮತ್ತು ಈಶಾನ್ಯದ ಜನರೊಂದಿಗೆ ಇವೆ. ನಿಮ್ಮನ್ನು ನಮ್ಮ ಸಹ ಭಾರತೀಯ ಸಹೋದರ ಸಹೋದರಿಯರೆಂದು ಕರೆಯಲು ನಾವು ಹೆಮ್ಮೆಪಡುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಆರು ಆರೋಪಿಗಳ ಪೈಕಿ ಐವರನ್ನು ಬಂಧಿಸಲಾಗಿದ್ದು, ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾನೆ. ಪ್ರಮುಖ ಆರೋಪಿ ಬಂಧನಕ್ಕೆ ಮಾಹಿತಿ ನೀಡುವವರಿಗೆ ಉತ್ತರಾಖಂಡ ಪೊಲೀಸರು 25,000 ರೂ. ನಗದು ಬಹುಮಾನ ಘೋಷಿಸಿದ್ದಾರೆ. ಈ ಮಧ್ಯೆ ಪ್ರಮುಖ ಆರೋಪಿ ಬಂಧನಕ್ಕೆ ಮಾಹಿತಿ ನೀಡುವವರಿಗೆ ತಿಪ್ರಾ ಮೋಥಾ ಮುಖ್ಯಸ್ಥ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮಾ ಸೋಮವಾರ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !