ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮ್ರಾಟ್ ಅಶೋಕ ಸೇರಿದಂತೆ ವಿವಿಧ ಚಕ್ರವರ್ತಿಗಳ ಶಿಲಾಶಾಸನಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಸಂರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಇಂದು ರಾಜ್ಯಸಭೆಯಲ್ಲಿ ಮನವಿ ಮಾಡಿದರು.
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಅಶೋಕನ ಶಿಲಾಶಾಸನವು ಅತ್ಯಂತ ಮಹತ್ವದ ಐತಿಹಾಸಿಕ ಆಧಾರವಾಗಿದೆ, ಏಕೆಂದರೆ ಇದು ಚಕ್ರವರ್ತಿಯನ್ನು ನೇರವಾಗಿ ‘ದೇವನಾಂಪ್ರಿಯ ಅಶೋಕ’ ಎಂದು ಉಲ್ಲೇಖಿಸಿದ ಮೊದಲ ಶಾಸನವಾಗಿದೆ.
ಈ ಶಾಸನವು ಪ್ರಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿದೆ. ಇದು ಬೌದ್ಧ ಧರ್ಮದ ಪ್ರಸಾರ ಮತ್ತು ಮೌರ್ಯರ ಇತಿಹಾಸವನ್ನು ತಿಳಿಸುತ್ತದೆ. ಇದೇ ರೀತಿ ಹಲವೆಡೆಗಳಲ್ಲಿ ಶಿಲಾಶಾಸನವು ಇದ್ದು, ಅವುಗಳನ್ನು ಯಾವುದಾದರೂ ರೂಪದಲ್ಲಿ ಸಂರಕ್ಷಿಸಿ ಇಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಮಧ್ಯಪ್ರಾಚ್ಯ ಯುದ್ಧದಂಥ ಈ ಗಂಭೀರ ಸ್ಥಿತಿಯ ಸಂದರ್ಭದಲ್ಲಿಯೂ ಭಾರತ ಪ್ರಗತಿಯಾಗುತ್ತಿರುವುದನ್ನು ಇಡೀ ವಿಶ್ವ ಗಮನಿಸುತ್ತಿದೆ. ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿ ಇರುವಾಗ, ಕೇಂದ್ರ ಸರ್ಕಾರದ ಜೊತೆ ವಿರೋಧ ಪಕ್ಷಗಳೂ ಕೈಜೋಡಿಸುವ ಅಗತ್ಯವಿದ್ದು, ಈ ಬಗ್ಗೆ ಅವರಿಗೆ ಸೂಕ್ತ ಸಲಹೆ ನೀಡುವ ಅಗತ್ಯವಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದೆ ಡಾ. ಸಂಗೀತಾ ಬಲವಂತ್ ಮನವಿ ಮಾಡಿಕೊಂಡರು.
ಬಳಿಕ ನಡೆದ ಪ್ರಶ್ನೋತ್ತರ ಕಲಾಪದಲ್ಲಿ, ವಿಮಾನ ವಿಳಂಬವಾದರೆ ಪ್ರಯಾಣಿಕರಿಗೆ ಪರಿಹಾರ ನೀಡುವ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು , ಕೆಲವು ಸಂದರ್ಭಗಳಲ್ಲಿ ಹವಾಮಾನ ವೈಪರೀತ್ಯ ಸೇರಿದಂತೆ ಕೆಲವು ಕಾರಣಗಳಿಂದ ವಿಮಾನ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಆ ಸಮಯದಲ್ಲಿ ಪರಿಸ್ಥಿತಿ ಕೈಮೀರಿದಾಗ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಅದನ್ನು ಹೊರತುಪಡಿಸಿದರೆ, ಪ್ರಯಾಣಿಕರಿಗೆ ಪರಿಹಾರ ನೀಡುವ ಹಾಗೂ ಅವರ ಹಣವನ್ನು ವಾಪಸ್ ಮಾಡುವ ಬಗ್ಗೆ ಈಗಾಗಲೇ ನಿಯಮ ರೂಪಿಸಲಾಗಿದೆ ಎಂದು ಹೇಳಿದರು.



