Thursday, October 23, 2025

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕ ಅರೆಸ್ಟ್‌, ಸಮಗ್ರ ತನಿಖೆ: ಜಿಲ್ಲಾಧಿಕಾರಿ

ಹೊಸದಿಗಂತ ವರದಿ ಚಿತ್ರದುರ್ಗ:

ನಾಯಕನಹಟ್ಟಿ ಪಟ್ಟಣದ ಶಾಲೆಯೊಂದರಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಶಿಕ್ಷಕನ ವಿರುದ್ಧ ನಾಯಕನಹಟ್ಟಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಬಂಧನ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಂಸ್ಕೃತ, ವೇದ ಅಧ್ಯಯನ ಪಾಠಶಾಲೆಯಲ್ಲಿ ಓರ್ವ ವಿದ್ಯಾರ್ಥಿಯನ್ನು ಅದೇ ಶಾಲೆಯ ಶಿಕ್ಷಕ ವೀರೇಶ್ ಹಿರೇಮಠ ಎಂಬವವರು ಥಳಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತಂತೆ ಸಂಬಂಧಿಸಿದ ತಹಸಿಲ್ದಾರ್ ಹಾಗೂ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿವಾಹಕ ಅಧಿಕಾರಿ ಅವರಿಂದ ಮಾಹಿತಿ ಪಡೆದು, ಆರೋಪಿತ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.

ಶಾಲೆಗಳಲ್ಲಿ ಶೈಕ್ಷಣಿಕ ಬೋಧನೆಯ ಜೊತೆಗೆ, ಶಾಲೆಯ ಅವಧಿಯ ಬಳಿಕ ಸಂಸ್ಕೃತ, ವೇದ ಅಧ್ಯಯನ ಕೈಗೊಳ್ಳಲು ಬಯಸುವ ಮಕ್ಕಳಿಗೆ, ಅವರು ತಮ್ಮ ಶಾಲೆಯ ಪಾಠಗಳ ಜೊತೆಗೆ ಸಂಸ್ಕೃತ, ವೇದ ಅಧ್ಯಯನ ಕೈಗೊಳ್ಳಲು ಊಟ, ವಸತಿಯೊಂದಿಗೆ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಅಧೀನದ ಕೊಠಡಿಗಳಲ್ಲಿ ಅವಕಾಶ ಮಾಡಿಕೊಡಲಾಗಿರುತ್ತದೆ.

ಈ ರೀತಿ ಸಂಸ್ಕೃತ ವೇದ ಅಧ್ಯಯನಕ್ಕೆಂದು ಸೇರಿಕೊಂಡಿದ್ದ ವಿದ್ಯಾರ್ಥಿಗಳ ಪೈಕಿ, ಓರ್ವ ವಿದ್ಯಾರ್ಥಿಯನ್ನು ಆರೋಪಿತ ಶಿಕ್ಷಕ ವೀರೇಶ್ ಹಿರೇಮಠ ಎಂಬುವವರು ಮನಸೋ ಇಚ್ಛೆ ಥಳಿಸಿರುವ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ಬಗ್ಗೆ ಗಮನಕ್ಕೆ ಬಂದ ಕೂಡಲೇ ಸಂಬಂಧಿಸಿದ ತಹಸಿಲ್ದಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಿಇಒ, ಡಿಡಿಪಿಐ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಿಂದ ಮಾಹಿತಿ ಪಡೆಯಲಾಗಿದೆ.

ಮಾಹಿತಿ ಅನುಸಾರ ಈ ಹಲ್ಲೆ ಪ್ರಕರಣವು ೨೦೨೫ ರ ಫೆಬ್ರವರಿ ತಿಂಗಳಿನಲ್ಲಿ ನಡೆದಿದ್ದು, ಈಗಷ್ಟೇ ವಿಡಿಯೋ ಮೂಲಕ ಬೆಳಕಿಗೆ ಬಂದಿದೆ. ಆದಾಗ್ಯೂ ವಿದ್ಯಾರ್ಥಿಯ ಮೇಲೆ ಶಿಕ್ಷಕ ಹಲ್ಲೆ ಮಾಡಿರುವುದು ಅಮಾನವೀಯ ಪ್ರಕರಣವಾಗಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ಶಿಕ್ಷಕನ ಮೇಲೆ ನಾಯಕನಹಟ್ಟಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಶಿಕ್ಷಕನ ಬಂಧನ ಕೈಗೊಳ್ಳಲಾಗಿದೆ.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಸುಮಾರು ೩೦ ವಿದ್ಯಾರ್ಥಿಗಳು ಸಂಸ್ಕೃತ, ವೇದ ಅಧ್ಯಯನ ಪಾಠ ಕಲಿಯುತಿದ್ದರು. ಆದರೆ ಪ್ರಸ್ತುತ ಕೇವಲ ೦೪ ಮಕ್ಕಳು ಮಾತ್ರ ಇದ್ದು, ಹೀಗಾಗಿ ಈ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣವು ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನದ ಅಧೀನದಲ್ಲಿನ ವಸತಿ ಕೊಠಡಿಯಲ್ಲಿ ಜರುಗಿದ್ದು, ಪ್ರಕರಣವು ಕಳೆದ ಫೆಬ್ರವರಿ ತಿಂಗಳಿನಲ್ಲೇ ಆಗಿದ್ದರೂ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯು ಈ ಬಗ್ಗೆ ಜಿಲ್ಲಾಡಳಿತದ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ತಿಳಿಸಿಲ್ಲ.
ಅಲ್ಲದೇ ಈ ಬಗ್ಗೆ ಯಾವುದೇ ಕ್ರಮವನ್ನೂ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ್ದಾರೆ. ಹೀಗಾಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗೂ ಈ ಕುರಿತು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕರಣ ಕುರಿತು ವಿವರ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಿಳಿಸಿದ್ದಾರೆ.

error: Content is protected !!