ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಚಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣನವರ್ ಅವರು ಇಂದು ತಮ್ಮ ಪುತ್ರನ ನಾಮಕರಣವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈಯಿಂದ ನೆರವೇರಿಸಿದರು. ವಿಶೇಷವೆಂದರೆ, ಶಾಸಕರು ತಮ್ಮ ಮಗನಿಗೆ ಡಿಸಿಎಂ ಅವರ ಹೆಸರನ್ನೇ ಅಂದರೆ ‘ಶಿವಕುಮಾರ್’ ಎಂದೇ ನಾಮಕರಣ ಮಾಡಿಸಿದರು.
ಈ ಅಪರೂಪದ ಕ್ಷಣದ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ!” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
“ನನ್ನ ಗೃಹ ಕಚೇರಿಯಲ್ಲಿ ಇಂದು ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರ ಮಗನಿಗೆ ‘ಶಿವಕುಮಾರ್’ ಎಂದು ನಾಮಕರಣ ಮಾಡುವ ಭಾಗ್ಯ ನನ್ನದಾಯಿತು. ನನ್ನ ಹೆಸರನ್ನು ಮಗುವಿಗೆ ಇಡಲು ನಿರ್ಧರಿಸಿದ ಶಾಸಕರ ಈ ನಡೆಗೆ ನಾನು ಧನ್ಯ!” ಎಂದು ಡಿಸಿಎಂ ಭಾವುಕರಾಗಿದ್ದಾರೆ.
ಮಗುವು ಮುಂದಿನ ದಿನಗಳಲ್ಲಿ ನನಗಿಂತಲೂ ಎತ್ತರಕ್ಕೆ ಬೆಳೆದು, ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತರುವಂತಾಗಲಿ ಎಂದು ಹಾರೈಸಿದರು. ಅಲ್ಲದೆ, ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಈ ‘ಶಿವಕುಮಾರ’ ಕರುನಾಡನ್ನು ಬೆಳಗುವ ಕುವರನಾಗಲಿ ಎಂದು ಮನತುಂಬಿ ಶುಭಕೋರಿದ್ದಾರೆ.

