February 6, 2026
Friday, February 6, 2026
spot_img

ಮುಗಿತಾಬಂತು ‘ದಿತ್ವಾ’ ಅಬ್ಬರ: ಆದ್ರೆ ವರುಣ ದೇವರು ನಮ್ಮನ್ನ ಬಿಡೋದೇ ಇಲ್ಲ ಅಂತಿದ್ದಾರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಹಲವು ಭಾಗಗಳಲ್ಲಿ ಕಳೆದ ವಾರ ಆತಂಕ ಮೂಡಿಸಿದ್ದ ದಿತ್ವಾ ಚಂಡಮಾರುತ ಇದೀಗ ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ಮಳೆಯ ತೀವ್ರತೆ ಇಳಿಕೆಯಾಗಿದ್ದರೂ, ಹವಾಮಾನ ಸಂಪೂರ್ಣವಾಗಿ ಶಾಂತಗೊಂಡಿಲ್ಲ.

ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಕರ್ನಾಟಕ ಸೇರಿ ದಕ್ಷಿಣ ಭಾರತದ ಕೆಲ ಪ್ರದೇಶಗಳಲ್ಲಿ ಇಂದು ಮಳೆಯ ಸಾಧ್ಯತೆ ಮುಂದುವರಿದಿದೆ. ಉತ್ತರ ಭಾರತದಲ್ಲಿ ಶೀತಗಾಳಿಯ ಪ್ರಭಾವ ಹೆಚ್ಚಾಗಲಿದ್ದು, ಚಳಿಯ ತೀವ್ರತೆ ಏರಿಕೆಯಾಗುವ ನಿರೀಕ್ಷೆಯಿದೆ.

ಬಂಗಾಳಕೊಲ್ಲಿಯಲ್ಲಿ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಬಳಿ ಉಂಟಾಗಿದ್ದ ತೀವ್ರ ಕಡಿಮೆ ಒತ್ತಡ ವಲಯ ಇದೀಗ ಸಂಪೂರ್ಣ ದುರ್ಬಲಗೊಂಡಿದೆ. ಆದರೂ ಗಾಳಿಯ ಹರಿವಿನ ಪರಿಣಾಮವಾಗಿ ದಕ್ಷಿಣ ಕರಾವಳಿಯ ಕೆಲವು ಭಾಗಗಳಲ್ಲಿ ಇನ್ನೂ ಎರಡು ದಿನಗಳವರೆಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಕೆಲವು ಜಿಲ್ಲೆಗಳಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯ ಸೂಚನೆ ನೀಡಲಾಗಿದೆ.

ಕರ್ನಾಟಕದ ವಿಷಯಕ್ಕೆ ಬಂದರೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸುತ್ತಮುತ್ತ ಭಾಗಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಮಳೆ ಸುರಿಯುವ ನಿರೀಕ್ಷೆಯಿದೆ. ಮಲೆನಾಡು ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದ ಕೆಲ ಭಾಗಗಳಲ್ಲಿ ಸಂಜೆ ವೇಳೆಗೆ ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲೂ ಮಳೆ ಕಾಣಿಸಿಕೊಳ್ಳಬಹುದು. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.

ಇತ್ತ ಉತ್ತರ ಭಾರತದ ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ಭಾಗಗಳಲ್ಲಿ ಶೀತ ಅಲೆಯ ಸ್ಥಿತಿ ಹೆಚ್ಚಾಗುವ ಸಾಧ್ಯತೆ ಇದೆ. ಡಿಸೆಂಬರ್ ಎರಡನೇ ವಾರದಲ್ಲಿ ದೇಶದ ಹಲವೆಡೆ ಹವಾಮಾನದಲ್ಲಿ ತ್ವರಿತ ಬದಲಾವಣೆಗಳು ಕಂಡುಬರುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !