ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಷ್ಟು ಹೇಳಿದರೂ ಬೆಂಗಳೂರಿಗರಿಗೆ ಬುದ್ಧಿ ಬರುತ್ತಿಲ್ಲ. ರಸ್ತೆಯಲ್ಲಿ ಜನ ಹಾಕಿದ ಕಸವನ್ನು ತೆಗೆದು ತೆಗೆದು ಸಾಕಾದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ವಿನೂತನ ಪ್ರಯತ್ನದಿಂದ ಜನರಿಗೆ ಬುದ್ಧಿ ಕಲಿಸಲು ತಯಾರಾಗಿದೆ.
ಇನ್ನು ಮುಂದೆ ರಸ್ತೆಯಲ್ಲಿ ಯಾರಾದರೂ ಕಸ ಎಸೆದರೆ, ಅದೇ ಕಸವನ್ನು ವಾಪಾಸ್ ಅವರ ಮನೆಯ ಮುಂದೆ ಎಸೆಯಲಾಗುತ್ತದೆ.
ತ್ಯಾಜ್ಯ ನಿರ್ವಹಣೆ ಕುರಿತು ಸಾಕಷ್ಟು ಜಾಗೃತಿ ಅಭಿಯಾನಗಳು, ಎಚ್ಚರಿಕೆ ದಂಡ ಹೀಗೆ ಹಲವಾರು ಕ್ರಮಗಳನ್ನು ತೆಗೆದುಕೊಂಡಾದ ಮೇಲೂ ಬೆಂಗಳೂರಿನ ನಿವಾಸಿಗಳು ಅಕ್ರಮವಾಗಿ ಎಲ್ಲೆಂದರಲ್ಲಿ ಕಸ ಬಿಸಾಡುತ್ತಾ ಪರಿಸರ ನಾಶ ಮಾಡುತ್ತಿರುವುದರಿಂದ ಬೇಸತ್ತ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಕಸ ಬಿಸಾಡುವವರಿಗೆ ಬುದ್ದಿ ಕಲಿಸಲು ಕೊನೆಯ ಆಯ್ಕೆ ಎಂದು ಬಿಎಸ್ಡಬ್ಲ್ಯೂ ಎಮ್ಎಲ್ ಸಿಇಒ ಕರೀ ಗೌಡ ಹೇಳಿದ್ದಾರೆ.
ಕಸವನ್ನು ಎಸೆದವರ ಮನೆಗಳ ಮುಂದೆಯೇ ಆ ಕಸವನ್ನು ತೆಗೆದುಕೊಂಡು ಬಂದು ಬಿಸಾಡುವ ವಿನೂತನ ಪ್ರಯತ್ನ ಮಾಡಲು ಸಿದ್ದವಾಗಿದ್ದಾರೆ. ಅಧಿಕಾರಿಗಳ ಪ್ರಕಾರ ಬೆಂಗಳೂರಿನ 198 ವಾರ್ಡ್ಗಳಲ್ಲಿ ಮಾರ್ಷಲ್ಗಳನ್ನು ನಿಯೋಜಿಸಲಾಗಿದೆ. ಇವರು ಕಸ ಎಸೆಯುವವರನ್ನು ಗುರುತಿಸುವ ಮತ್ತು ವೀಡಿಯೊ ರೆಕಾರ್ಡಿಂಗ್ ಮಾಡುವ ಕಾರ್ಯವನ್ನು ನಿರ್ವಹಿಸುತ್ತಾರೆ. ನಂತರ, ಕಪ್ಪು ಚುಕ್ಕೆಗಳಲ್ಲಿ ಕಂಡುಬರುವ ಕಸವನ್ನು ಆಯಾ ಮನೆಗಳಿಗೆ ಹಿಂತಿರುಗಿಸಲಾಗುತ್ತದೆ.
ಮನೆ ಬಾಗಿಲ ಮುಂದೆ ಬೀಳಲಿದೆ ನೀವೇ ರಸ್ತೆಗೆ ಎಸೆದ ಕಸ! ಬೆಂಗಳೂರಲ್ಲಿ ಹೊಸ ಪ್ರಯತ್ನ

