ಹೊಸದಿಗಂತ ಯಲ್ಲಾಪುರ:
ಇದು ಕೇವಲ ಒಂದು ಸುದ್ದಿಯಲ್ಲ, ಕಾಡಿನ ನಡುವಿನ ಸಮುದಾಯವೊಂದು ನಾಡಿನ ಅತ್ಯುನ್ನತ ಪ್ರಜಾಪ್ರಭುತ್ವದ ವೇದಿಕೆಯಲ್ಲಿ ಸಬಲವಾಗಿ ನಿಂತ ಐತಿಹಾಸಿಕ ಕ್ಷಣ! ಯಲ್ಲಾಪುರದ ಹೆಮ್ಮೆ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರು ತಾತ್ಕಾಲಿಕವಾಗಿ ಪರಿಷತ್ ಸಭಾಪತಿಗಳ ಆಸನ ಅಲಂಕರಿಸಿ, ಕಲಾಪವನ್ನು ಅದ್ಭುತವಾಗಿ ನಡೆಸಿಕೊಟ್ಟರು.

ಒಂದು ಕಾಲದಲ್ಲಿ ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದ ವನವಾಸಿ ಸಿದ್ದಿ ಸಮುದಾಯದ ವ್ಯಕ್ತಿಯೊಬ್ಬರು ಇಂದು ಸದನದ ‘ಸಾರಥ್ಯ’ ವಹಿಸಿದ್ದು ಇಡೀ ರಾಜ್ಯದ ಗಮನ ಸೆಳೆದಿದೆ.
ಶಾಂತಾರಾಮ ಅವರ ಈ ಏಳಿಗೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶಿಸ್ತು ಮತ್ತು ದಶಕಗಳ ಪರಿಶ್ರಮವಿದೆ. ವನವಾಸಿ ಕಲ್ಯಾಣ ಆಶ್ರಮದ ಮೂಲಕ ಸಿದ್ದಿ ಸಮುದಾಯದ ಹಕ್ಕುಗಳಿಗಾಗಿ ಮತ್ತು ಅಭಿವೃದ್ಧಿಗಾಗಿ ಅವರು ನಡೆಸಿದ ನಿಸ್ವಾರ್ಥ ಸೇವೆಗೆ ಇಂದು ದಕ್ಕಿದ ಗೌರವ ಇದು ಎಂದು ಜನರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಸಂಘದ ತತ್ವಾದರ್ಶಗಳೇ ಇವರನ್ನು ಸಾಮಾನ್ಯ ಕಾರ್ಯಕರ್ತನಿಂದ ಈ ಎತ್ತರಕ್ಕೆ ಬೆಳೆಸಿದೆ ಎಂಬುದು ಅಭಿಮಾನಿಗಳ ಮಾತು.



