Saturday, December 13, 2025

ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿತು ‘ಸನಾತನ ರಾಷ್ಟ್ರ’ದ ಭವ್ಯ ಶಂಖನಾದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೆ ಜಿಹಾದಿ ಭಯೋತ್ಪಾದಕರು ಎಲ್ಲೆಂದರಲ್ಲಿ ಬಾಂಬ್ ಸ್ಫೋಟ ಮಾಡುತ್ತಿದ್ದರು, ಆದರೆ ಈಗ ಅವರಿಗೆ ಹಾಗೆ ಮಾಡುವ ಮೊದಲೇ ತಕ್ಕ ಉತ್ತರ ನೀಡಲಾಗುತ್ತಿದೆ ದೆಹಲಿಯ ಸಾಂಸ್ಕೃತಿಕ ಕಾರ್ಯಮಂತ್ರಿ ಕಪಿಲ್ ಮಿಶ್ರಾ ಅವರು ಹೇಳಿದರು.

ಅವರು ದೇಶದ ರಾಜಧಾನಿ ದೆಹಲಿಯ ‘ಭಾರತ್ ಮಂಡಪಮ್ ’ನಲ್ಲಿ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ವತಿಯಿಂದ ಪ್ರಸ್ತುತಪಡಿಸಿದ ಹಾಗೂ ‘ಸನಾತನ ಸಂಸ್ಥೆ’ಆಯೋಜಿಸಿದ ಭವ್ಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರು ಹತ್ಯೆಗೀಡಾಗುತ್ತಿದ್ದು, ಇದರಿಂದ ಜಾತ್ಯತೀತರೆಂದು ಕರೆಯಲ್ಪಡುವವರ ಹೊಟ್ಟೆಯಲ್ಲಿ ನೋವು ಶುರುವಾಗಿದೆ. ಈ ನೋವು ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಅವರು ದೆಹಲಿಯಲ್ಲಿ ಬಾಂಬ್ ಸ್ಫೋಟ ಮಾಡಿ ಜನರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಿದರು, ಆದರೆ ನಮ್ಮಲ್ಲಿ ಭಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಇದಕ್ಕೆ ವಿರುದ್ಧವಾಗಿ, ಎಷ್ಟು ಜಿಹಾದಿ ಭಯೋತ್ಪಾದಕರು ಹುಟ್ಟುತ್ತಾರೋ, ಅಷ್ಟು ಛತ್ರಪತಿ ಶಿವಾಜಿ ಮಹಾರಾಜರು ದೇಶದ ಪ್ರತಿ ಮನೆಯಲ್ಲಿಯೂ ಜನಿಸಲಿದ್ದಾರೆ ಎಂಬ ಸ್ಪಷ್ಟ ಸಂದೇಶ ನೀಡಿದರು.

ಈ ಸಂದರ್ಭ ಪರಮ ಪೂಜ್ಯ ಶಾಂತಿಗಿರಿ ಮಹಾರಾಜ್, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ ಅಂಜಲಿ ಗಾಡಗೀಳ, ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಅಧ್ಯಕ್ಷರು ಮತ್ತು ಭಾರತದ ಮಾಜಿ ಮಾಹಿತಿ ಆಯುಕ್ತರಾದಉದಯ ಮಾಹೂರಕರ, ಸುದರ್ಶನ್ ನ್ಯೂಸ್‌ನ ಪ್ರಧಾನ ಸಂಪಾದಕರಾದ ಸುರೇಶ್ ಚವ್ಹಾಣ್ಕೆ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಮತ್ತು ಸನಾತನ ಸಂಸ್ಥೆಯ ವಕ್ತಾರರಾದ ಅಭಯ ವರ್ತಕ ಅವರ ಕರಕಮಲಗಳಿಂದ ದೀಪ ಬೆಳಗುವುದರ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಕಪಿಲ್ ಮಿಶ್ರಾ ಅವರು ಮುಂದುವರಿದು ಮಾತನಾಡುತ್ತಾ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಾಷ್ಟ್ರದ ನಿಜವಾದ ಸಮಸ್ಯೆಗಳ ಬಗ್ಗೆ ಚರ್ಚೆಯ ಅಗತ್ಯವಿದ್ದಾಗ, ಸ್ವತಃ ಸರ್ಕಾರವೇ ಅದನ್ನು ವಿರೋಧಿಸುತ್ತಿತ್ತು ಮತ್ತು ಇಂತಹ ವಿಷಯಗಳ ಬಗ್ಗೆ ಎಲ್ಲಿ ಚರ್ಚಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತಿತ್ತು. ಆದರೆ, ಇಂದು ನಡೆಯುತ್ತಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳ ಬೆಂಬಲವಿದೆ. ಮುಂಬರುವ ದಿನಗಳಲ್ಲಿ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಉನ್ನತಿಗಾಗಿ ಪ್ರತಿಯೊಬ್ಬ ನಾಗರಿಕನು ನಿರಂತರವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಬೇಕು ಎಂದರು.

ಈ ಸಂದರ್ಭ ‘ವಂದೇ ಮಾತರಮ್ ‘ ಗೀತೆಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಹಾಜರಿದ್ದ ಎಲ್ಲರೂ ಸಾಮೂಹಿಕವಾಗಿ ‘ವಂದೇ ಮಾತರಮ್ ’ಗೀತೆಯನ್ನು ಹಾಡಿ ರಾಷ್ಟ್ರಭಾವನೆಯನ್ನು ಜಾಗೃತಗೊಳಿಸಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯವೂ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿತು. ಉದ್ಘಾಟನಾ ಸಮಾರಂಭದಲ್ಲಿ ಸೊರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶದ ದರ್ಶನವನ್ನು ಎಲ್ಲರಿಗೂ ಮಾಡಿಸಲಾಯಿತು ಮತ್ತು ಸದ್ಗುರುಗಳಿಂದ ಪೂಜೆ ಮಾಡಿಸಿ ಅದರ ಮಹತ್ವವನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆ ನಿರ್ಮಿತ ಹಿಂದಿ ಪುಸ್ತಕ ‘ಸಂಕಲ್ಪ ರಾಮರಾಜ್ಯ ಕಾ’ಮತ್ತು ವೇದವೀರ್ ಆರ್ಯ ರಚಿತ ಇಂಗ್ಲಿಷ್ ಗ್ರಂಥ ‘ಕ್ರೋನಾಲಜಿ ಆ್ಯಂಡ್ ಒರಿಜಿನ್ಸ್ ಆಫ್ ಇಂಡೋ ಯುರೋಪಿಯನ್ ಸಿವಿಲೈಸೇಶನ್’ ಅನ್ನು ಲೋಕಾರ್ಪಣೆ ಮಾಡಲಾಯಿತು.

ಇಂದು ಒಟಿಟಿ (OTT) ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಶ್ಲೀಲತೆಯು ಹರಡುತ್ತಿದೆ. ಹಿಂದವೀ ಸ್ವರಾಜ್ಯ ಸ್ಥಾಪನೆಯಾದಂತೆಯೇ, ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಕಠಿಣತೆ ಅಗತ್ಯವಿದೆ. ಪ್ರತಿಯೊಬ್ಬ ಭಾರತೀಯನು ‘ವಿಕೃತಿ ಸಾಮಗ್ರಿ ಮುಕ್ತ ಭಾರತ’ದ ಸಂಕಲ್ಪ ಮಾಡಬೇಕು ಎಂದು ಉದಯ ಮಾಹೂರಕರ ಅವರು ಆಹ್ವಾನ ನೀಡಿದರು.

ಸನಾತನ ಸಂಸ್ಥೆಯ ವಕ್ತಾರರಾದ ಅಭಯ ವರ್ತಕ ಅವರು, ಇಂದು ದೇಶದಲ್ಲಿ ಭಯೋತ್ಪಾದಕರ ‘ಸ್ಲೀಪರ್ ಸೆಲ್’ ಇಲ್ಲದ ಜಿಲ್ಲೆ ಅಥವಾ ರಾಜ್ಯವಿಲ್ಲ ಎಂದರು.

ಎರಡು ರಂಗಗಳಲ್ಲಿ ಸೇನೆ ಮತ್ತು ಸರ್ಕಾರ ಹೋರಾಡುತ್ತಿವೆ; ಅರ್ಧ ರಂಗದಲ್ಲಿ ಜನಸಾಮಾನ್ಯರು ಹೋರಾಡಬೇಕಿದೆ. ಆಗ ಮಾತ್ರ ಭಯೋತ್ಪಾದಕರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ. ಇದೇ ಉದ್ದೇಶದಿಂದ ನಾವು ದೇಶದ ರಾಜಧಾನಿ ಕುರುಕ್ಷೇತ್ರದ ಸಮೀಪ ‘ಸನಾತನ ರಾಷ್ಟ್ರ’ದ ಶಂಖನಾದ ಮಾಡುತ್ತಿದ್ದೇವೆ ಎಂದರು.

ಈ ಮಹೋತ್ಸವವನ್ನು SanatanRashtraShankhnad.in ವೆಬ್‌ಸೈಟ್‌ನಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ. ಹಾಗೆಯೇ, ಭಾರತ್ ಮಂಡಪಮ್ ಆವರಣದ ಹಾಲ್ ನಂ 12 ರಲ್ಲಿ ಅಳವಡಿಸಲಾಗಿರುವ ಐತಿಹಾಸಿಕ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ನೋಡಲು ಎಲ್ಲರಿಗೂ ಆಹ್ವಾನ ನೀಡಲಾಗಿದೆ.

error: Content is protected !!