ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಐಟಿ, ಬಿಟಿ, ವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿ, ಅಭಿವೃದ್ಧಿ ಕಾಣುತ್ತಿರುವ ಪ್ರಗತಿಶೀಲ ರಾಜ್ಯ ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಎಂಬ ಕುಖ್ಯಾತಿ ಪಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಒಂದೆಡೆ ಬರ, ಇನ್ನೊಂದೆಡೆ ಅತಿವೃಷ್ಟಿಗೆ ಬೆಳೆ ನಷ್ಟ, ಬೆಲೆ ಕುಸಿತ ಹಾಗೂ ಸಾಲದ ಶೂಲಕ್ಕೆ ಸಿಲುಕಿ ರೈತರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ.
2023-24 ರಿಂದ 2025-26ರ ನವೆಂಬರ್ವರೆಗೆ 2,809 ರೈತರು ಆತ್ಮಹತ್ಯೆಯ ಮೊರೆ ಹೋಗಿದ್ದಾರೆ. ಕೃಷಿ ಇಲಾಖೆ ನೀಡಿದ ಅಂಕಿ – ಅಂಶದಂತೆ 2023-2024ರಲ್ಲಿ ರಾಜ್ಯದಲ್ಲಿ 1,254 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2024-25ನೇ ಸಾಲಿನಲ್ಲಿ 1,178 ಹಾಗೂ 2025-26ನೇ ಸಾಲಿನ ನವೆಂಬರ್ವರೆಗೆ 377 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
2023-24ನೇ ಸಾಲಿನಲ್ಲಿ ವರದಿಯಾಗಿರುವ 1,254 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ ಸುಮಾರು 164 ಪ್ರಕರಣಗಳು ವೈಯಕ್ತಿಕ ಉದ್ದೇಶ ಸೇರಿ ಇತರ ಉದ್ದೇಶದಿಂದ ತಿರಸ್ಕೃತವಾಗಿವೆ. 1,090 ಪ್ರಕರಣಗಳು ಪರಿಹಾರಕ್ಕೆ ಅರ್ಹ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಅದೇ 2024-25 ಸಾಲಿನಲ್ಲಿ ವರದಿಯಾಗಿರುವ 1,178 ಪ್ರಕರಣಗಳ ಪೈಕಿ ಸುಮಾರು 156 ಪ್ರಕರಣಗಳು ತಿರಸ್ಕೃತವಾಗಿದ್ದು, 1,022 ಪ್ರಕರಣಗಳನ್ನು ಪರಿಹಾರ ನೀಡಲು ಅರ್ಹ ಪ್ರಕರಣಗಳೆಂದು ತೀರ್ಮಾನಿಸಲಾಗಿದೆ. ಇನ್ನು 2025-26ನೇ ಸಾಲಿನಲ್ಲಿ ನವೆಂಬರ್ 15ರವರೆಗೆ ವರದಿಯಾದ 377 ಪ್ರಕರಣಗಳ ಪೈಕಿ 46 ತಿರಸ್ಕೃತವಾಗಿದೆ. ಇನ್ನು 331 ಪರಿಹಾರ ಯೋಗ್ಯ ಪ್ರಕರಣ ಎಂದು ತೀರ್ಮಾನಿಸಲಾಗಿದೆ.

