ಹೊಸದಿಗಂತ ವರದಿ ಹುಬ್ಬಳ್ಳಿ:
ಮಾರ್ಯಾದೆ ಹೆಸರಿನಲ್ಲಿ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಮಸೂದೆ ಜಾರಿಗೆ ತರುವ ಅವಶ್ಯಕತೆ ಇಲ್ಲ. ಇಂತಹ ಘಟನೆ ನಡೆಯದಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಹೊಸ ಕಾನೂನು ತರುವುದಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ತಾಲೂಕಿನ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತರ ದೌರ್ಜನ್ಯ ತಡೆಗೆ ಅನೇಕ ಕಾನೂನುಗಳಿವೆ. ಜನರಿಗೆ ರಕ್ಷಣೆ ನೀಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಹೊಸ ಮಸೂದೆ ತಂದರೆ ನೂರಾ ಎಂಟರಲ್ಲಿ ಇದೊಂದು ಕಾನೂನು ಆಗಲಿದೆ ಹೊರತು ಅದರಿಂದ ಏನು ಪ್ರಯೋಜನವಾಗಲ್ಲ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಮಾಜವೇ ತಲೆ ತಗ್ಗಿಸುವಂತಹ ಹತ್ಯೆಯಾಗಿದೆ. ಸಮಾಜ ಬಹಳ ಮುಂದು ವರೆದಿದ್ದು, ಸಮಾಜವನ್ನು ಅರಿಯದವರು ಇಂತಹ ಕೃತ್ಯ ಮಾಡುತ್ತಾರೆ. ಇದು ಅಮಾನವೀಯ ಘಟನೆಯಾಗಿದೆ ಎಂದು ತಿಳಿಸಿದರು.
ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಬದುಕಿದ ನಾಡಿದು. ಬಸವಣ್ಣನವರು ಜಾತಿ ರಹಿತ ಸಮಾಜ ನಿರ್ಮಿಸಿದ್ದರು. ಅಷ್ಟಾಗೀಯ ಇಂತಹ ಘಟನೆ ನಡೆಯಬಾರದಿತ್ತು ಎಂದು ಹೇಳಿದರು.

