ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 17 ನೇ ಬಜೆಟ್ ವಿರುದ್ಧ ಬಿಜೆಪಿ ಸರಣಿ ಟೀಕೆಗಳನ್ನು ಮಾಡುತ್ತಿದ್ದು, ಇದು ‘ಬ್ರದರ್ಸ್ ಬಜೆಟ್.. ಓಲೈಕೆ ರಾಜಕಾರಣವೇ ಪರಮ ಗುರಿ’ ಎಂದು ಕಿಡಿಕಾರಿದೆ.
ಇತ್ತ ಟ್ವೀಟ್ ಮಾಡಿರುವ ಬಿಜೆಪಿ, ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಬಜೆಟ್ ಘೋಷಣೆ ಮಾಡಿರುವ ಯೋಜನೆಗಳನ್ನು ಉಲ್ಲೇಖಿಸಿ ಕಿಡಿಕಾರಿದ್ದು,ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ರಾಜ್ಯದ ಬೊಕ್ಕಸದ ಬಹುಪಾಲನ್ನೇ ಮೀಸಲಿಟ್ಟಿರುವುದು ನಾಡಿನ ದೌರ್ಭಾಗ್ಯ ಎಂದು ಟ್ವೀಟ್ ಮಾಡಿದೆ.
ಮತ್ತೊಂದು ಟ್ವೀಟ್ ನಲ್ಲಿ, ಬಜೆಟ್ ಪುಸ್ತಕದ ಪುಟಗಳಲ್ಲಿ ನೀವು ಸೃಷ್ಟಿಸಿದ ಉದ್ಯೋಗಗಳನ್ನು ಬಿಡಿ. ಡಿಗ್ರಿ ಹಿಡಿದು ಕೆಲಸವಿಲ್ಲದೆ ಅಲೆಯುತ್ತಿರುವ ನಿರುದ್ಯೋಗಿಗಳು ಮಾಡಿದ ಹೋರಾಟದ ಬಗ್ಗೆ ಮಾತನಾಡಿ ಎಂದು ಹೇಳಿದೆ.
ಶಕ್ತಿ ಯೋಜನೆಗಾಗಿ KSRTC ಸೇರಿದಂತೆ ಸಾರಿಗೆ ನಿಗಮಗಳಿಗೆ ಸಿದ್ದರಾಮಯ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಮೊತ್ತ ಬರೋಬ್ಬರಿ ₹5,313 ಕೋಟಿ! ಅನುದಾನವಿಲ್ಲದೆ ನಿಗಮಗಳು ಉಸಿರುಗಟ್ಟುತ್ತಿವೆ. ಕೊರತೆ ಬೋಗಸ್ ಬಜೆಟ್ ಮಂಡಿಸಿದ ಸಾಲರಾಮಯ್ಯನವರು ಕರ್ನಾಟಕವನ್ನು ಸಾಲದ ಕೂಪಕ್ಕೆ ದೂಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಸಾಲ ಮಾಡುವುದರಲ್ಲಿ ಸಿಎಂ ಸಿದ್ದರಾಮಯ್ಯ ನಿಸ್ಸೀಮರು! ಕನ್ನಡಿಗರಿಗೆ ‘ಸಾಲದ ಭಾಗ್ಯ’ ನೀಡುವುದೇ ನಿಮ್ಮ ಬಜೆಟ್ನ ಅಸಲಿ ಸಾಧನೆಯೇ? ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕಿದ್ದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದೆ.ಕರ್ನಾಟಕದ ಒಟ್ಟು ಸಾಲ 8.24 ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ್ದು, ಪ್ರತಿ ಕನ್ನಡಿಗನ ಮೇಲೆ 1.17 ಲಕ್ಷ ರೂಪಾಯಿ ಸಾಲದ ಹೊರೆ ಹೊರಿಸಲಾಗಿದೆ. ಸಾಲ ಮಾಡುವುದರಲ್ಲಿ ನಂಬರ್ 1, ಅಭಿವೃದ್ಧಿ ಮಾತ್ರ ಶೂನ್ಯ – ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ! ಎಂದು ಬಿಜೆಪಿ ಕಿಡಿಕಾರಿದೆ.



