ಹೊಸದಿಗಂತ ವರದಿ ವಿಜಯನಗರ:
ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ನಾಡಿನ ಪ್ರತಿಷ್ಠಿತ `ನಾಡೋಜ’ ಗೌರವ ಪದವಿಗೆ ಈ ಬಾರಿ ಬಹುಭಾಷೆ ಹಾಗೂ ಬಹುಶಿಸ್ತುಗಳ ತಜ್ಞರು, ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಪ್ರಕಾಂಡ ಪಂಡಿತ ಶತಾಯುಷಿ ಪ್ರೊ.ಸಿ.ಮಹಾದೇವಪ್ಪ, ಮಾರ್ಕ್ಸ್ವಾದಿ ಡಾ.ಜಿ.ರಾಮಕೃಷ್ಣ ಹಾಗೂ ದಕ್ಷ ಆಡಳಿತಗಾರ, ರಾಜ್ಯ ಮಾಹಿತಿ ಹಕ್ಕು ಆಯುಕ್ತ ಡಾ.ಹೆಚ್.ಸಿ.ಸತ್ಯನ್ ಭಾಜನರಾಗಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿರುವ ನವರಂಗ' ಬಯಲು ರಂಗಮಂದಿರರದಲ್ಲಿ ಫೆ.24 ರಂದು ಸಂಜೆ 5.30ಕ್ಕೆ ಆಯೋಜಿಸಿರುವ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬ(ಘಟಿಕೋತ್ಸವ)ದಲ್ಲಿ ರಾಜ್ಯಪಾಲರೂ ಆಗಿರುವ ಕನ್ನಡ ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಗಣ್ಯರಿಗೆನಾಡೋಜ'(ಗೌರವ ಡಾಕ್ಟರೇಟ್) ಪದವಿ ಪ್ರದಾನ ಮಾಡಲಾಗುತ್ತದೆ.
ಇದನ್ನೂ ಓದಿ:
ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಡಾ.ಕೆ.ಮರಳಸಿದ್ದಪ್ಪ ಅವರು ಘಟಿಕೋತ್ಸವ ಭಾಷಣವನ್ನು ನೆರವೇರಿಸಲಿದ್ದಾರೆ. ಸಹ ಕುಲಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಮುಖ್ಯಅತಿಥಿಯಾಗಿ ಪಾಲ್ಗೊಳ್ಳುವರು.
ಇದೇ ವೇಳೆ ಕನ್ನಡ ವಿಶ್ವವಿದ್ಯಾಲಯದ ವಿವಿಧ ನಿಕಾಯಗಳಡಿ ಕನ್ನಡ ವಿಶ್ವವಿದ್ಯಾಲಯ ಹಾಗೂ ವಿಸ್ತರಣಾ ಕೇಂದ್ರಗಳಲ್ಲಿ ಸಂಶೋಧನೆ ನಡೆಸಿರುವ 107 ಜನ ವಿದ್ಯಾರ್ಥಿಗಳು ಪಿಎಚ್ಡಿ ಪದವಿ ಪಡೆಯಲಿದ್ದಾರೆ ಕುಲಪತಿ ಎಂದು ಪ್ರೊ.ಪರಮಶಿವಮೂರ್ತಿ ಮಾಹಿತಿ ನೀಡಿದರು.



