ಹೊಸದಿಗಂತ ವರದಿ, ಮಂಗಳೂರು:
ಮಂಗಳೂರು ನಗರದ ಪಂಪ್ವೆಲ್ ಸರ್ಕಲ್ನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ದಿ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ಫೆ. 15 ರಿಂದ ಜೂನ್ 15 ರವರೆಗೆ ನಡೆಯಲಿದ್ದು, ನಗರದಲ್ಲಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ.
ಫೆ. 15 ರಿಂದ ಜೂ. 15 ರವರೆಗೆ ಪಂಪುವೆಲ್ ವೃತ್ತದಿಂದ ಕಂಕನಾಡಿ ಹಳೇ ರಸ್ತೆ – ಕಂಕನಾಡಿ ಜಂಕ್ಷನ್ಗೆ (ಮಂಗಳೂರು ನಗರಕ್ಕೆ ಒಳಬರುವ ರಸ್ತೆ) ಮತ್ತು ಕರಾವಳಿ ಜಂಕ್ಷನ್ನಿಂದ – ಪಂಪುವೆಲ್ ವೃತ್ತ ದವರೆಗಿನ (ಮಂಗಳೂರು ನಗರದಿಂದ ಹೊರ ಹೋಗುವ ರಸ್ತೆ) ಬೈಪಾಸ್ ರಸ್ತೆಗಳನ್ನು ತಾತ್ಕಾಲಿಕವಾಗಿ ಏಕಮುಖ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿದ್ದು, ಈ ರಸ್ತೆಯಲ್ಲಿ ವಾಹನ ದಟ್ಟನೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಬೇಕಿದೆ.
ಪಂಪ್ವೆಲ್ ಜಂಕ್ಷನ್ ನಿಂದ ಕರಾವಳಿ ಜಂಕ್ಷನ್ಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ, ಕಂಕನಾಡಿ ಹಳೇ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ತಲಪಾಡಿ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಪರ್ಯಾಯ ರಸ್ತೆಯಾದ ಮಹಾಕಾಳಿಪಡ್ಪು, ಮಾರ್ಗನ್ಸ್ ಗೇಟ್, ಕೋಟಿಚೆನ್ನಯ ಸರ್ಕಲ್ ಅಥವಾ ಮಂಗಳಾದೇವಿ ಮುಖಾಂತರ ಸಂಚರಿಸುವುದು.
ಬಿ.ಸಿ ರೋಡ್ ಕಡೆಯಿಂದ ಬರುವಂತಹ ಭಾರಿ ವಾಹನಗಳು, ಇತರೆ ವಾಹನಗಳು ಮತ್ತು ಲಾಲ್ಬಾಗ್ ಬಸ್ಸು ನಿಲ್ದಾಣಕ್ಕೆ ತೆರಳುವ ಕೆಎಸ್ಆರ್ ಟಿಸಿ ಬಸ್ಸುಗಳು ಪಡೀಲ್ ಜಂಕ್ಷನ್ನಿಂದ ನಂತೂರು ಕಡೆಗೆ ಹಾಗೂ ಕೇರಳ-ಕಾಸರಗೋಡು ಕಡೆಯಿಂದ ಕರಾವಳಿ ಕಡೆಗೆ ಬರುವ ಭಾರಿ ವಾಹನಗಳು ಮತ್ತು ಕೆಎಸ್ಆರ್ ಟಿಸಿ ಬಸ್ಸುಗಳು ಪಂಪ್ವೆಲ್ ಜಂಕ್ಷನ್ ನಿಂದ ನಂತೂರು ಕಡೆಗೆ ಸಂಚರಿಸುವುದು.
ಮಂಗಳೂರು ನಗರದ ಒಳಭಾಗದಿಂದ ಕರಾವಳಿ ಜಂಕ್ಷನ್ ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಯಥವಾತ್ತಾಗಿ ಸಂಚರಿಸುವುದು. ಕಂಕನಾಡಿ ಜಂಕ್ಷನ್-ಪಂಪುವೆಲ್ ರಸ್ತೆ(ಕಂಕನಾಡಿ ಓಲ್ಡ್ ರಸ್ತೆ), ಕರಾವಳಿ-ಕಂಕನಾಡಿ ರಸ್ತೆ, ಕಂಕನಾಡಿ-ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆ ರಸ್ತೆ, ಕರಾವಳಿ-ಬಲ್ಮಠ ರಸ್ತೆ ಹಾಗೂ ಕಂಕನಾಡಿ ಬೈಪಾಸ್ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ.
ಈ ಕಾಮಗಾರಿ ಮತ್ತು ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



