March 15, 2026
Sunday, March 15, 2026
spot_img

ಟ್ರಂಪ್ ಟ್ಯಾರಿಫ್ ನೀತಿ ಆರ್ಥಿಕ ಯುದ್ಧದಂತೆ…ಸ್ವದೇಶೀ ಮೂಲಕ ನೀಡೋಣ ಪ್ರತ್ಯುತ್ತರ: ಬಾಬಾ ರಾಮದೇವ್ ಕರೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ನೀತಿಯನ್ನು ಯೋಗ ಗುರು ಬಾಬಾ ರಾಮದೇವ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ದೇಶದ ಮೇಲೆ ಟ್ಯಾರಿಫ್ ವಿಧಿಸುವುದು ಭಯೋತ್ಪಾದನೆ ಹರಿಬಿಟ್ಟಂತೆ. ಅಮೆರಿಕದ ಟ್ಯಾರಿಫ್ ಕ್ರಮವು ಭಾರತವೂ ಒಳಗೊಂಡಂತೆ ಇತರ ದೇಶಗಳ ಮೇಲೆ ಮಾಡಲಾಗುತ್ತಿರುವ ಆರ್ಥಿಕ ಯುದ್ಧವಾಗಿದೆ ಎಂದು ಹೇಳಿದರು.

ಈ ವೇಳೆ ಅಮೆರಿಕ ಘೋಷಿಸಿರುವ ಆರ್ಥಿಕ ಯುದ್ಧಕ್ಕೆ ಭಾರತೀಯರು ಸ್ವದೇಶೀ ಮೂಲಕ ಪ್ರತ್ಯುತ್ತರ ಕೊಡಬೇಕು ಎಂದು ಪತಂಜಲಿ ಸಂಸ್ಥಾಪಕರು ಕರೆ ಕೊಟ್ಟಿದ್ದಾರೆ. ಸ್ವದೇಶೀ ವಸ್ತುಗಳನ್ನು ಜನರು ಖರೀದಿಸಿದರೆ ಸರ್ವಜನರ ಏಳ್ಗೆ ಸಾಧ್ಯವಾಗುತ್ತದೆ ಎಂಬುದು ಅವರ ಅನಿಸಿಕೆ ಎಂದರು.

ಟ್ಯಾರಿಫ್ ಎಂಬುದು ಭೀಕರವಾಗಿರುವ ಭಯೋತ್ಪಾದನೆ. ಮೂರನೇ ವಿಶ್ವ ಮಹಾಯುದ್ಧ ಎಂಬುದು ಇದ್ದರೆ ಅದು ಈ ಆರ್ಥಿಕ ಯುದ್ಧವೇ ಆಗಿದೆ. ಈ ಸಂದರ್ಭದಲ್ಲಿ ಬಡ ಮತ್ತು ಅಭಿವೃದ್ಧಿಶೀಲ ದೇಶಗಳ ಯೋಗಕ್ಷೇಮವು ಕನಿಷ್ಠ ಅಗತ್ಯವಾಗಿದೆ. ಅಧಿಕಾರದಲ್ಲಿರುವವರು ಸಾಮ್ರಾಜ್ಯವಾದಿ ಮತ್ತು ವಿಸ್ತರಣಾವಾದಿಗಳಾಗಿದ್ದಾರೆ’ ಎಂದು ಡೊನಾಲ್ಡ್ ಟ್ರಂಪ್ ವಿರುದ್ಧ ಬಾಬಾ ರಾಮದೇವ್ ಕಿಡಿಕಾರಿದ್ದಾರೆ.

ಜಗತ್ತಿನಲ್ಲಿ ಕೆಲವೇ ವ್ಯಕ್ತಿಗಳ ಬಳಿ ಅಧಿಕಾರ ಕೇಂದ್ರಿತವಾಗಿದೆ. ವಿಶ್ವಾದ್ಯಂತ ರಕ್ತಪಾತ, ಸಂಘರ್ಷ ಹೆಚ್ಚುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಮಿತಿಯೊಳಗೆ ಇದ್ದು ಎಲ್ಲರೂ ಒಟ್ಟಿಗೆ ಅಭಿವೃದ್ಧಿಹೊಂದುವಂತಹ ಧೋರಣೆಯನ್ನು ಬೆಳೆಸಿಕೊಳ್ಳಬೇಕು ಎಂದು ಪತಂಜಲಿ ಸಹ-ಸಂಸ್ಥಾಪಕರು ಕರೆ ಕೊಟ್ಟಿದ್ದಾರೆ.

ಅಮೆರಿಕದ ಟ್ಯಾರಿಫ್ ಕ್ರಮವು ಆರ್ಥಿಕ ಯುದ್ಧವಾಗಿದೆ. ಇದಕ್ಕೆ ಸ್ವದೇಶೀ ತತ್ವದ ಮೂಲಕ ಉತ್ತರ ಕೊಡಬಹುದು ಎಂದು ಹೇಳಿದ ರಾಮದೇವ್, ಭಾರತದ ಮಹೋನ್ನತ ವ್ಯಕ್ತಿಗಳಾದ ಮಹರ್ಷಿ ದಯಾನಂದ್, ಸ್ವಾಮಿ ವಿವೇಕಾನಂದ್ ಮೊದಲಾದ ಮಹನೀಯರು ಸ್ವದೇಶೀ ತತ್ವದ ಪ್ರತಿಪಾದನೆ ಮಾಡುತ್ತಿದ್ದುದನ್ನು ಉಲ್ಲೇಖಿಸಿದ್ದಾರೆ.

‘ಸ್ವದೇಶೀ ಎಂಬುದು ಸ್ವಾವಲಂಬನೆ, ಹಾಗೂ ಕೊತ್ತಕೊನೆಯ ವ್ಯಕ್ತಿಯ ಅಭ್ಯುದಯ ಸಾಧಿಸುವಂತಹ ತತ್ವವಾಗಿದೆ. ಮಹರ್ಷಿ ದಯಾನಂದರಿಂದ ಹಿಡಿದಿ ಸ್ವಾಮಿ ವಿವೇಕಾನಂದರವರೆಗೆ ಬಹಳಷ್ಟು ಮನೀಯರು ಸ್ವದೇಶೀ ತತ್ವ ಪ್ರತಿಪಾದನೆ ಮಾಡಿದ್ದಾರೆ. ಸರ್ವಜನರ ಏಳ್ಗೆ ಆಗಬೇಕೆಂದು ಇವರೆಲ್ಲರೂ ಹೇಳಿದ್ದಾರೆ. ನಿಮ್ಮ ಜೊತೆಗೆ, ನಿಮ್ಮ ಸುತ್ತಲಿರುವ ಜನರ ಏಳ್ಗೆಗೆ ಬದ್ಧರಾಗಿ. ಇದು ಸ್ವದೇಶೀ ತತ್ವದ ಮೂಲ’ ಎಂದು ಯೋಗ ಗುರುಗಳು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !