ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಂಠಪೂರ್ತಿ ಕುಡಿದು ಇಬ್ಬರು ಪೊಲೀಸ್ ಅಧಿಕಾರಿಗಳು ವಾಹನ ಚಲಾಯಿಸಿದ್ದಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೆಹಲಿಯ ರಾಮಕೃಷ್ಣ ಆಶ್ರಮ ಮೆಟ್ರೋ ಸ್ಟೇಷನ್ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಗಂಗಾರಾಮ್ ತಿವಾರಿ ಎಂದು ಗುರುತಿಸಲಾಗಿದ್ದು, ಟೀ ಸ್ಟಾಲ್ವೊಂದನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಸಹಾಯಕ ಸಬ್-ಇನ್ಸ್ಪೆಕ್ಟರ್ ರವೀಂದ್ರ ಹಾಗೂ ಕಾನ್ಸ್ಟೆಬಲ್ ಅರುಣ್ ಅನ್ನು ಅಮಾನತುಗೊಳಿಸಿದ್ದಾರೆ.
ಗುರುವಾರ (ಸೆ.18) ಬೆಳಗ್ಗೆ 5ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ಕುರಿತು ಮೃತ ವ್ಯಕ್ತಿಯ ಮಗ ಮಾತನಾಡಿ, ಇಬ್ಬರು ಅಧಿಕಾರಿ ಹಾಗೂ ಓರ್ವ ಮಹಿಳೆಯಿದ್ದ ಪೊಲೀಸ್ ವಾಹನವು ನನ್ನ ತಂದೆಗೆ ಡಿಕ್ಕಿ ಹೊಡೆದಿದೆ. ಅವರು ತುಂಬಾ ಕುಡಿದಿದ್ದರು. ನನ್ನ ತಂದೆ ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ರ್ಯಾಂಪ್ ಮೇಲೆ ವಾಹನ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.