Tuesday, January 13, 2026
Tuesday, January 13, 2026
spot_img

Viral | ಇಂಥವರಿದ್ರೆ ನಮ್ಮ ದೇಶ ಸ್ವಚ್ಛವಾಗೋದು ಯಾವಾಗ? ವಿದೇಶಿಗನ ಕ್ಯಾಮೆರಾದಲ್ಲಿ ಸೆರೆಯಾಯ್ತು ಆಸಾಮಿಯ ‘ಘನಕಾರ್ಯ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಆರ್ಥಿಕ ರಾಜಧಾನಿ ಮುಂಬೈನ ಐಕಾನಿಕ್ ಪ್ರವಾಸಿ ತಾಣ ಗೇಟ್‌ವೇ ಆಫ್ ಇಂಡಿಯಾ ಬಳಿ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅರಬ್ಬೀ ಸಮುದ್ರಕ್ಕೆ ವ್ಯಕ್ತಿಯೊಬ್ಬರು ನಿರ್ಲಕ್ಷ್ಯವಾಗಿ ತ್ಯಾಜ್ಯ ಎಸೆದ ದೃಶ್ಯ ವಿದೇಶಿ ಪ್ರವಾಸಿಯೊಬ್ಬರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿದೆ.

ವಿಡಿಯೋದಲ್ಲಿ, ಚಿಕ್ಕ ಮಗಳೊಂದಿಗೆ ಬಂದಿದ್ದ ವ್ಯಕ್ತಿ ತನ್ನ ವಾಹನವನ್ನು ಸಮುದ್ರದ ಅಂಚಿನ ಬಳಿ ನಿಲ್ಲಿಸಿ, ಯಾವುದೇ ಹಿಂಜರಿಕೆಯಿಲ್ಲದೆ ಕಸವನ್ನು ನೀರಿಗೆ ಸುರಿಯುತ್ತಿರುವುದು ಕಾಣಬಹುದು. ಈ ಕೃತ್ಯವನ್ನು ಗಮನಿಸಿದ ವಿದೇಶಿ ಪ್ರವಾಸಿ ಆ ವ್ಯಕ್ತಿಯನ್ನು ಪ್ರಶ್ನಿಸಿದರೂ, ಅವನು ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ಹೊರಟುಹೋಗಿದ್ದಾನೆ. ವಿಡಿಯೋದ ಅಂತ್ಯದಲ್ಲಿ ಪ್ರವಾಸಿ “ಇದು ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾನೆ.

ಈ ದೃಶ್ಯಗಳು ಸಾರ್ವಜನಿಕವಾಗಿ ಹರಡುತ್ತಿದ್ದಂತೆ, ನಾಗರಿಕ ಪ್ರಜ್ಞೆ, ತ್ಯಾಜ್ಯ ನಿರ್ವಹಣೆ ಮತ್ತು ಕಾನೂನು ಜಾರಿಯ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದಿವೆ. ವಿದೇಶಿ ಅತಿಥಿಗಳ ಎದುರು ಮತ್ತು ದೇಶದ ಪ್ರತಿಷ್ಠಿತ ಸ್ಥಳದಲ್ಲಿ ಇಂತಹ ಘಟನೆ ನಡೆದಿರುವುದು ಮುಜುಗರ ತಂದಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಏಕೆ ಮಧ್ಯಪ್ರವೇಶಿಸಲಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ.

ಸಾಮಾಜಿಕ ಜಾಲತಾಣ ಬಳಕೆದಾರರು ಕಠಿಣ ದಂಡ ಹಾಗೂ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದು, ನಾಗರಿಕ ಶಿಸ್ತು ಬೆಳೆಸಲು ಕಠಿಣ ಶಿಕ್ಷೆಗಳ ಜಾರಿಯೇ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಮತ್ತೊಮ್ಮೆ ಸ್ವಚ್ಛತೆ ಮತ್ತು ಹೊಣೆಗಾರಿಕೆಯ ಅಗತ್ಯವನ್ನು ನೆನಪಿಸಿದೆ.

Most Read

error: Content is protected !!