Tuesday, September 2, 2025

‘ನಾವು ಗೆದ್ದಿದ್ದೇವೆ’, ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಮರಾಠಾ ಮೀಸಲಾತಿ ಹೋರಾಟಗಾರ ಜರಂಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಸರ್ಕಾರ ಅರ್ಹ ಮರಾಠಾ ಸಮುದಾಯಕ್ಕೆ ಕುಂಬಿ ಜಾತಿ ಪ್ರಮಾಣಪತ್ರ ನೀಡುವುದು ಸೇರಿದಂತೆ ಅವರ ಹಲವು ಬೇಡಿಕೆಗಳನ್ನು ಒಪ್ಪಿದ ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಂಗೆ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಇಂದು ಅಂತ್ಯಗೊಳಿಸಿದ್ದಾರೆ.

ಮರಾಠಾ ಮೀಸಲಾತಿ ಕುರಿತ ಸಂಪುಟ ಉಪಸಮಿತಿಯು ಅರ್ಹ ಮರಾಠಾ ಸಮುದಾಯಕ್ಕೆ ಕುಂಬಿ ಜಾತಿ ಪ್ರಮಾಣಪತ್ರ ನೀಡುವುದು ಸೇರಿದಂತೆ ಜರಂಗೆ ಅವರ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಕೊಂಡಿದೆ.

ಮಹಾರಾಷ್ಟ್ರ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದ ರಾಜ್ಯ ಸರ್ಕಾರದ ಸಂಪುಟ ಉಪಸಮಿತಿಯೊಂದಿಗಿನ ಸಭೆಯ ನಂತರ ಮಾತನಾಡಿದ ಜರಂಗೆ ಅವರು, “ನಾವು ಗೆದ್ದಿದ್ದೇವೆ” ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಖೆ ಪಾಟೀಲ್ ಅವರು, ಸಮಿತಿಯ ಇತರ ಸದಸ್ಯರಾದ ಶಿವೇಂದ್ರಸಿಂಹ ಭೋಸಲೆ, ಉದಯ್ ಸಮಂತ್, ಮಾಣಿಕ್ರಾವ್ ಕೊಕಟೆ ಅವರೊಂದಿಗೆ ಇಂದು ಮಧ್ಯಾಹ್ನ ಜರಂಗೆ ಅವರನ್ನು ಭೇಟಿಯಾಗಿ ಸಮಿತಿ ಅಂತಿಮಗೊಳಿಸಿದ ಕರಡಿನ ಬಗ್ಗೆ ಚರ್ಚಿಸಿದರು.

ಹೈದರಾಬಾದ್ ಗೆಜೆಟ್ ಅನ್ನು ಜಾರಿಗೆ ತರಬೇಕೆಂಬ ಜರಂಗೆ ಅವರ ಬೇಡಿಕೆಯನ್ನು ಸಂಪುಟ ಉಪಸಮಿತಿ ಒಪ್ಪಿಕೊಂಡಿದೆ ಮತ್ತು ಕುಂಬಿ ದಾಖಲೆಗಳನ್ನು ಹೊಂದಿರುವ ಮರಾಠರಿಗೆ ಸರಿಯಾದ ವಿಚಾರಣೆ ನಡೆಸಿದ ನಂತರ ಜಾತಿ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ