ಹೊಸದಿಗಂತ ಡಿಜಿಟಲ್ ಡೆಸ್ಕ್:
“ದೇವೇಗೌಡರು ಅಂದು ನಿಮ್ಮ ಬೆನ್ನಿಗೆ ನಿಲ್ಲದಿದ್ದರೆ ನೀವು ಇಂದು ಕನಿಷ್ಠ ಒಂದು ನಿಗಮ ಮಂಡಳಿಯ ಅಧ್ಯಕ್ಷರೂ ಆಗುತ್ತಿರಲಿಲ್ಲ” ಹೀಗೆಂದು ಹೇಳುವ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವೆಗೌಡರು ಸ್ವಜಾತಿ ವಿರೋಧಿಗಳು ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿರುವ ಹೆಚ್ಡಿಕೆ, ಸಿದ್ದರಾಮಯ್ಯನವರು ಇಂದು ಅನುಭವಿಸುತ್ತಿರುವ ಅಧಿಕಾರ ಮತ್ತು ಸಾಮಾಜಿಕ ನ್ಯಾಯದ ಹರಿಕಾರ ಎಂಬ ಪಟ್ಟ ಎಲ್ಲವೂ ದೇವೇಗೌಡರು ಹಾಕಿಕೊಟ್ಟ ಭಿಕ್ಷೆ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.
ದೇವೇಗೌಡರು ಕುಟುಂಬ ರಾಜಕಾರಣ ಮಾಡಿದ್ದರೆ ಸಿದ್ದರಾಮಯ್ಯನವರಿಗೆ ಹಣಕಾಸು ಸಚಿವ ಸ್ಥಾನ ಬಿಡಿ, ಸಣ್ಣ ಹುದ್ದೆಯೂ ಸಿಗುತ್ತಿರಲಿಲ್ಲ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪೋಷಾಕು ಧರಿಸಿದ ‘ಸಂಹಾರಿ’ ಎಂದು ಹೆಚ್ಡಿಕೆ ಟೀಕಿಸಿದ್ದಾರೆ.
ಅಧಿಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯನವರು ಜಾತಿಯನ್ನು ಎಳೆದು ತರುತ್ತಿದ್ದಾರೆ ಎಂಬ ತಮ್ಮ ಆರೋಪವನ್ನು ಹೆಚ್ಡಿಕೆ ಪುನರುಚ್ಚರಿಸಿದ್ದಾರೆ.
ಸಿದ್ದರಾಮಯ್ಯನವರನ್ನು ಹಣಕಾಸು ಮಂತ್ರಿ ಮಾಡುವಾಗ ದೇವೇಗೌಡರ ಸಮಕಾಲೀನರು ಸಿದ್ದರಾಮಯ್ಯನವರ ಬಗ್ಗೆ ಏನೆಲ್ಲಾ ಹೇಳಿದ್ದರು ಎಂಬುದು ನೆನಪಿದೆಯೇ ಎಂದು ಪ್ರಶ್ನಿಸುವ ಮೂಲಕ ಹಳೆಯ ಕಿಚ್ಚನ್ನು ಹಚ್ಚಿದ್ದಾರೆ.



