ಹೊಸದಿಗಂತ ವರದಿ,ಮಡಿಕೇರಿ:
ಹಾಡಹಗಲೇ ಬೆಳೆಗಾರರೊಬ್ಬರನ್ನು ಬಲಿಪಡೆದ ಸುಮಾರು 34 ವರ್ಷದ ಕಾಡಾನೆಯನ್ನು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಶುಕ್ರವಾರ ಸಂಜೆ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆ ಬಾಡಗ ಬಾಣಂಗಾಲ ಸಮೀಪದ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದ ಕಂಜನ್, ಸುಗ್ರೀವ, ಧನಂಜಯ್, ಪ್ರಶಾಂತ್ ಹರ್ಷ ಹಾಗೂ ಅಯ್ಯಪ್ಪ ಎಂಬ ಸಾಕಾನೆಗಳನ್ನು ಬಳಸಿಕೊಳ್ಳಲಾಯಿತು.
ಪಶುವೈದ್ಯರಾದ ಡಾ. ರಮೇಶ್ ರಂಜನ್ ಅವರ ಮೇಲ್ವಿಚಾರಣೆಯಲ್ಲಿ ಕಾಡಾನೆಗೆ ಅರವಳಿಕೆ ಮದ್ದು ನೀಡಿ, ಸಾಕಾನೆಗಳ ಸಹಾಯದಿಂದ ಅದನ್ನು ಸುತ್ತುವರಿದು ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು.
ಈ ಕಾಡಾನೆ ಗುರುವಾರ ಸಿದ್ದಾಪುರ ಸಮೀಪದ ಕಾಫಿ ತೋಟದಲ್ಲಿ ದಾಳಿ ನಡೆಸಿ ಬೆಳೆಗಾರ ಗಣಪತಿ (49) ಅವರನ್ನು ಬಲಿ ಪಡೆದಿತ್ತು.



