April 9, 2026
Thursday, April 9, 2026
spot_img

ಬರೀ ರಸ್ತೆ, ಚರಂಡಿ ಕಟ್ಟಿದರೆ ಬಡವರು ಉದ್ಧಾರ ಆಗ್ತಾರಾ?: ವಿಪಕ್ಷಕ್ಕೆ ಗೃಹ ಸಚಿವ ಖಡಕ್ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪದೇ ಪದೇ ಟೀಕಿಸುತ್ತಿರುವ ವಿರೋಧ ಪಕ್ಷಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಖಾರವಾಗಿ ತಿರುಗೇಟು ನೀಡಿದ್ದಾರೆ. ಭೌತಿಕ ಸೌಲಭ್ಯಗಳಿಗಿಂತ ಜನರ ಜೀವನೋಪಾಯವನ್ನು ಸುಧಾರಿಸುವ ಯೋಜನೆಗಳು ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

“ಬರೀ ರಸ್ತೆ, ಚರಂಡಿ ಕಟ್ಟಿದರೆ ಜನ ಉದ್ಧಾರ ಆಗ್ತಾರಾ?” ಎಂದು ವಿಪಕ್ಷದವರನ್ನು ನೇರವಾಗಿ ಪ್ರಶ್ನಿಸಿದ ಪರಮೇಶ್ವರ್, ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆಯಾಗಿದೆ ಎಂದು ಸಮರ್ಥಿಸಿಕೊಂಡರು.

ಗ್ಯಾರಂಟಿ ಕಾರ್ಯಕ್ರಮಗಳನ್ನು ಒಪ್ಪದಿರುವವರಿಗೆ ಸಚಿವರು ಒಂದು ಸವಾಲೆಸೆದರು: “ಈಗ ನಾವು ಗ್ಯಾರಂಟಿ ಕೊಡುವುದನ್ನು ನಿಲ್ಲಿಸಿಬಿಡೋಣ. ನಾವು ಕೊಡುತ್ತಿರುವ ಈ 58 ಸಾವಿರ ಕೋಟಿ ರೂ. ಅನ್ನು ನಿಲ್ಲಿಸಿದರೆ, ನೀವು ರಸ್ತೆ ಮಾಡುವುದರಿಂದ, ಚರಂಡಿ ಮಾಡುವುದರಿಂದ ಆ ಬಡವರ ಜೀವನ ಏನಾಗುತ್ತದೆ? ಅವರು ಉದ್ಧಾರ ಆಗುತ್ತಾರೆಯೇ?”

ಶೋಷಣೆ ನಿವಾರಣೆಯೇ ಮುಖ್ಯ ಗುರಿ: ಭೌತಿಕ ಸೌಲಭ್ಯಗಳ ನಿರ್ಮಾಣ ಕಾರ್ಯ ನಿಂತಿಲ್ಲ ಎಂದು ಒಪ್ಪಿಕೊಂಡ ಪರಮೇಶ್ವರ್, ಅವುಗಳ ಅನುಷ್ಠಾನದಲ್ಲಿ ಒಂದಿಷ್ಟು ವಿಳಂಬವಾಗಿರಬಹುದು ಎಂದರು. “ಆದರೆ, ನಮ್ಮ ಉದ್ದೇಶ ಬಹಳ ಮುಖ್ಯವಾಗಿದೆ. ಮನುಷ್ಯನ ಜೀವನದಲ್ಲಿ ಇರುವ ಸಾವಿರಾರು ವರ್ಷದ ಶೋಷಣೆ ಮುಂದುವರಿಯಬಾರದು. ಅದಕ್ಕಾಗಿ ನಾವು ಈ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದೇವೆ,” ಎಂದು ಹೇಳುವ ಮೂಲಕ, ಗ್ಯಾರಂಟಿ ಯೋಜನೆಗಳನ್ನು ಕೇವಲ ಚುನಾವಣೆ ಆಮಿಷಕ್ಕಿಂತ ಸಾಮಾಜಿಕ ನ್ಯಾಯದ ಸಾಧನ ಎಂದು ಬಣ್ಣಿಸಿದರು.

ಸಚಿವರ ಈ ಹೇಳಿಕೆ, ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ‘ಕಲ್ಯಾಣ ಯೋಜನೆ vs ಅಭಿವೃದ್ಧಿ’ ಚರ್ಚೆಗೆ ಮತ್ತಷ್ಟು ಇಂಧನ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !