March 20, 2026
Friday, March 20, 2026
spot_img

ಭದ್ರತೆ ಇಲ್ಲದೆ ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕರು: ಸ್ಥಳೀಯರ ಸಾಹಸದಿಂದ ಪಾರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ಹೃದಯ ಭಾಗದಲ್ಲಿರುವ ನೀಲಸಂಧ್ರದ ಜಾನ್ಸನ್ ಮಾರ್ಕೆಟ್ ಬಳಿ, ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಮ್ಯಾನ್‌ಹೋಲ್‌ಗೆ ಇಳಿದ ಇಬ್ಬರು ಕಾರ್ಮಿಕರು ವಿಷಾನಿಲದಿಂದಾಗಿ ಅಸ್ವಸ್ಥಗೊಂಡ ಭೀಕರ ಘಟನೆಯು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.

ಘಟನೆಯ ವಿವರ:

ಕಳೆದ ಎರಡು ದಿನಗಳಿಂದ ಡ್ರೈನೇಜ್ ಬ್ಲಾಕ್ ಆಗಿದ್ದರಿಂದ, ಅದರ ಪರಿಶೀಲನೆಗೆ ಜಲಮಂಡಳಿ ಸಿಬ್ಬಂದಿ ಬಂದಿದ್ದರು. ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಮ್ಯಾನ್‌ಹೋಲ್‌ಗೆ ಇಳಿದ ತಕ್ಷಣವೇ ಕಾರ್ಮಿಕರು, ಒಳಗೆ ಶೇಖರಣೆಯಾಗಿದ್ದ ವಿಷಕಾರಿ ಅನಿಲದ ದುರ್ವಾಸನೆಗೆ ಸಿಲುಕಿ ಒದ್ದಾಡಿದ್ದಾರೆ. ಮೊದಲು ಇಬ್ಬರು ಅಸ್ವಸ್ಥಗೊಂಡರೆ, ಅವರನ್ನು ರಕ್ಷಿಸಲು ಪ್ರಯತ್ನಿಸಿದ ಇನ್ನೊಬ್ಬ ವ್ಯಕ್ತಿಗೂ ಅದೇ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿದುಬಂದಿದೆ.

ಕಾರ್ಮಿಕರು ಪ್ರಜ್ಞಾಹೀನರಾಗಿ ಹೋಲ್‌ನಲ್ಲಿ ಸಿಲುಕಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಮಯಪ್ರಜ್ಞೆ ಮೆರೆದು ಸ್ಥಳೀಯರಾದ ಮೊಹಮ್ಮದ್ ಖಾನ್ ಮತ್ತು ಇತರರು ಅವರನ್ನು ಮೇಲೆತ್ತಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಅಸ್ವಸ್ಥಗೊಂಡ ಇಬ್ಬರು ಕಾರ್ಮಿಕರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬನು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯರ ತ್ವರಿತ ಸ್ಪಂದನೆಯಿಂದಾಗಿ ಕಾರ್ಮಿಕರ ಜೀವ ಉಳಿದಂತಾಗಿದೆ. ಸುರಕ್ಷತಾ ಸಾಧನಗಳನ್ನು ನೀಡದಿರುವ ಜಲಮಂಡಳಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !