Monday, January 12, 2026

ಅಬ್ಬಾ! ಕೊನೆಗೂ ಸಿಕ್ತು ಗ್ರಾಮದ ನಿದ್ರೆಗೆಡಿಸಿದ್ದ ಚಿರತೆ: ಗ್ರಾಮಸ್ಥರಿಗೆ ಬಿಗ್ ರಿಲೀಫ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮತ್ತು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮವಾಗಿ ಯಶಸ್ವಿಯಾಗಿದ್ದಾರೆ. ಡಿ. 13ರ ಶನಿವಾರ ರಾತ್ರಿ ಚಿರತೆ ಬೋನಿನಲ್ಲಿ ಸೆರೆಯಾಗಿದ್ದು, ಇದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾರೋನಹಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಹಾರೋನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಉಪಟಳ ಮಿತಿ ಮೀರಿತ್ತು. ಈ ಕ್ರೂರ ಪ್ರಾಣಿಯು ರೈತರ ಮೇಕೆಗಳು ಮತ್ತು ಬೀದಿ ನಾಯಿಗಳ ಮೇಲೆ ದಾಳಿ ನಡೆಸಿ ಬಲಿ ಪಡೆಯುತ್ತಿತ್ತು. ಇದರಿಂದಾಗಿ ಇಡೀ ಗ್ರಾಮವು ಭಯಭೀತವಾಗಿತ್ತು.

ಈ ಕುರಿತು ಸ್ಥಳೀಯ ಮುಖಂಡ ಹಾಗೂ ಆರೂಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶ್ರೀಧರ್ ಅವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ವಿಷಯದ ಗಂಭೀರತೆ ಅರಿತ ಅರಣ್ಯ ಇಲಾಖೆಯ ಅಧಿಕಾರಿಗಳು, ವಿಳಂಬ ಮಾಡದೆ ಶನಿವಾರ ಸಂಜೆಯ ವೇಳೆಗೆ ಗ್ರಾಮದ ಸಮೀಪ ಬೋನ್ ಅಳವಡಿಸಿದ್ದರು.

ಅಚ್ಚರಿಯೆಂದರೆ, ಬೋನ್ ಇರಿಸಿದ ಕೇವಲ ಒಂದೇ ದಿನದಲ್ಲಿ ಚಿರತೆ ಯಶಸ್ವಿಯಾಗಿ ಬೋನಿಗೆ ಬಿದ್ದಿದೆ. ಅಧಿಕಾರಿಗಳ ತ್ವರಿತ ಪ್ರತಿಕ್ರಿಯೆ ಮತ್ತು ಕ್ರಮದಿಂದಾಗಿ ಗ್ರಾಮಸ್ಥರ ಬಹುದಿನಗಳ ಆತಂಕ ದೂರವಾದಂತಾಗಿದೆ. ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!