ಹೊಸದಿಗಂತ ಡಿಜಿಟಲ್ ಡೆಸ್ಕ್:
ದಟ್ಟ ಮಂಜಿನಿಂದಾಗಿ ಕಾರು ಎತ್ತರದ ಮಣ್ಣಿನ ದಿಣ್ಣೆಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಈ ದುರ್ಘಟನೆಯಲ್ಲಿ 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಪ್ರಾಣ ಕಳೆದುಕೊಂಡಿದ್ದಾರೆ.
ಶುಕ್ರವಾರ ರಾತ್ರಿ ಸೆಕ್ಟರ್ 150ರ ಸಮೀಪ ಈ ಅಪಘಾತ ನಡೆದಿದ್ದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವರಾಜ್ ಮೆಹ್ತಾ ಅವರ ಕಾರು ರಸ್ತೆ ಪಕ್ಕದ ಒಳಚರಂಡಿ ಪ್ರದೇಶದಲ್ಲಿದ್ದ ಎತ್ತರದ ಮಣ್ಣಿನ ದಿಣ್ಣೆಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ವಾಹನ ಸುಮಾರು 70 ಅಡಿ ಆಳದ ನೀರು ತುಂಬಿದ ಕಂದಕಕ್ಕೆ ಉರುಳಿದೆ.
ಅಪಘಾತದ ನಂತರ ಕಾರಿನಲ್ಲಿ ಸಿಲುಕಿದ್ದ ಮೆಹ್ತಾ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ತಂದೆಗೆ ಕರೆ ಮಾಡಿ, ತಾವು ನೀರಿನಲ್ಲಿ ಮುಳುಗುತ್ತಿರುವುದಾಗಿ ತಿಳಿಸಿ ರಕ್ಷಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕೆಲವೇ ಕ್ಷಣಗಳಲ್ಲಿ ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.
ವಿಷಯ ತಿಳಿದ ತಕ್ಷಣ ಪೊಲೀಸರು, ಎನ್ಡಿಆರ್ಎಫ್ ಮತ್ತು ಡೈವರ್ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸುಮಾರು ಐದು ಗಂಟೆಗಳ ಶೋಧದ ಬಳಿಕ ಕಾರು ಹಾಗೂ ಮೆಹ್ತಾ ಅವರ ಮೃತದೇಹವನ್ನು ಹೊರತೆಗೆಯಲಾಯಿತು.


