ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೇಮ ವಿವಾಹವಾದ ನಂತರವೂ ಪೋಷಕರು ಅದನ್ನು ಒಪ್ಪದೆ ಪ್ರೇಮಿಗಳನ್ನು ‘ಅಣ್ಣ-ತಂಗಿ’ ಎಂದು ಬಿಂಬಿಸಿದ ಕಾರಣಕ್ಕೆ ಬೇಸರಗೊಂಡು ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ನಡೆದಿದೆ.
ಗೋಪಲ್ಲಿ ಗ್ರಾಮದ ನಿವಾಸಿಗಳಾದ 19 ವರ್ಷದ ಸುಕನ್ಯಾ ಮತ್ತು ನಿತಿನ್ ಮೂರು ದಿನಗಳ ಹಿಂದಷ್ಟೇ ಕೈವಾರ ಸಮೀಪದ ದೇವಾಲಯದಲ್ಲಿ ವಿವಾಹವಾಗಿದ್ದರು. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರೂ, ಇವರ ಪ್ರೀತಿಗೆ ಮತ್ತು ವಿವಾಹಕ್ಕೆ ಎರಡೂ ಕುಟುಂಬಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿವಾಹದ ನಂತರ, ನಿತಿನ್ ಮತ್ತು ಸುಕನ್ಯಾ ಸಂಬಂಧದಲ್ಲಿ ಅಣ್ಣ-ತಂಗಿಯರಾಗುತ್ತಾರೆ ಎಂದು ಪೋಷಕರು ವರಸೆ ತೆಗೆದಿದ್ದಾರೆ. ಈ ಕಾರಣ ನೀಡಿ ನಿತಿನ್ ಕುಟುಂಬಸ್ಥರು ಯುವಕನಿಗೆ, ತನ್ನ ಪತ್ನಿಯನ್ನು ಬಿಡುವಂತೆ ಒತ್ತಾಯಿಸಿದ್ದಾರೆ. ಪೋಷಕರ ಈ ಮಾತುಗಳಿಂದ ತೀವ್ರ ಬೇಸರಗೊಂಡ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಸ್ವಸ್ಥಗೊಂಡಿದ್ದ ಯುವತಿಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

