Friday, December 5, 2025

ಕೃಷಿ ವಿಮುಖರಾಗುತ್ತಿರುವ ಯುವಕರು: ಸಮಗ್ರ ಕೃಷಿ ಪದ್ಧತಿಗೆ ಸಿಎಂ ಸಿದ್ದರಾಮಯ್ಯ ಕರೆ!

ಹೊಸದಿಗಂತ ಮಂಡ್ಯ:

ಭಾರತವು ಕೃಷಿ ಪ್ರಧಾನ ದೇಶವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಯುವಜನತೆ ಕೃಷಿಯಿಂದ ದೂರ ಸರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದೆ ಶೇಕಡಾ 80ರಷ್ಟಿದ್ದ ಕೃಷಿಯಲ್ಲಿ ತೊಡಗಿದವರ ಸಂಖ್ಯೆ, ಈಗ ಕೇವಲ ಶೇಕಡಾ 60ಕ್ಕೆ ಇಳಿದಿದೆ. ಅಂದರೆ, ಶೇಕಡಾ 20ರಷ್ಟು ಯುವಜನತೆ ಕೃಷಿ ಕ್ಷೇತ್ರದಿಂದ ವಿಮುಖರಾಗಿದ್ದಾರೆ ಎಂದು ಅವರು ಹೇಳಿದರು.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ತಾಲೂಕಿನ ವಿ.ಸಿ. ಫಾರಂನಲ್ಲಿ ಆಯೋಜಿಸಲಾದ ಮೂರು ದಿನಗಳ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಾಭದಾಯಕ ಕೃಷಿಗೆ ಸಮಗ್ರ ಪದ್ಧತಿ ಅಳವಡಿಸಿ:

“ಕೃಷಿಯಲ್ಲಿ ಲಾಭ ಬರುವುದಿಲ್ಲ ಎಂಬ ತಪ್ಪು ಭಾವನೆಯನ್ನು ತೊಡೆದು ಹಾಕಬೇಕಿದೆ. ಇದಕ್ಕಾಗಿ ರೈತರು ಸಮಗ್ರ ಕೃಷಿ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು” ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ತಮ್ಮ 60ರ ದಶಕದ ಕೃಷಿ ಅನುಭವವನ್ನು ನೆನಪಿಸಿಕೊಂಡ ಅವರು, “ಅಂದು ತಾಂತ್ರಿಕತೆ ಬೆಳೆದಿರಲಿಲ್ಲ. ಆದರೆ, ಇಂದು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ವ್ಯವಸಾಯ ಮಾಡಬಹುದು” ಎಂದರು.

ಮುಖ್ಯಮಂತ್ರಿಗಳು ರೈತರಿಗೆ ಮಹತ್ವದ ಸಲಹೆ ನೀಡಿ, “ರೈತರು ಕೃಷಿ ತಜ್ಞರ ಸಲಹೆ ಪಡೆಯಬೇಕು. ಕೇವಲ ಏಕ ಬೆಳೆಗೆ ಅಂಟಿಕೊಳ್ಳದೆ, ಬೇರೆ ಬೇರೆ ಉತ್ತಮ ತಳಿಗಳನ್ನು ಬೆಳೆಯುವತ್ತ ಗಮನ ಹರಿಸಬೇಕು. ಬೆಳೆದ ಉತ್ಪನ್ನಗಳಿಗೆ ಸರಿಯಾದ ಮೌಲ್ಯವರ್ಧನೆ ಮಾಡುವುದರಿಂದ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬಹುದು” ಎಂದು ತಿಳಿಸಿದರು.

error: Content is protected !!